[ ಕೆಲ ದಿನಗಳ ಹಿಂದೆ, ಸ್ನೇಹಿತರೆಲ್ಲ ಸೇರಿ ವಿಹಾರಕ್ಕೆಂದು ಹತ್ತಿರದ ಕೆರೆಗೆ ಹೋಗಿದ್ದೆವು..
ಅಲ್ಲಿನ ಆ ಆಹ್ಲಾದಕರ ವಾತಾವರಣದಲ್ಲಿ, ಗೆಳೆಯರೆಲ್ಲ ಕವನವೊಂದನ್ನು ಬರೆಯಲು ಹೇಳಿದಾಗ, ಬರೆದ ಕವನವಿದು..]
ನೀರತೆರೆಗಳ ಧ್ವಾನದಲ್ಲಿಯೂ, ನಿನ್ನ ಹೆಸರಿನ ಇಂಪಿದೆ..
ತಂಪು ವಾಯುವಿನೋಕುಳಿಯಲು, ಮೌನದುಸಿರಿನ ಕಂಪಿದೆ..||
ಸಾಲುಮರಗಳ ಎಲೆಯ ಮರೆಯಲಿ, ಮಂದಹಾಸದ ಹೂವಿದೆ..
ಕೆರೆಯ ತೀರದ ಶೀತಲತೆಯಲೂ, ನಿನ್ನ ನೆನಪಿನ ಕಾವಿದೆ..||
ಬಾನಿನಲಿ ಚಿತ್ತಾರ ಮೂಡಿಸಿ, ಹೊರಟ ಹಕ್ಕಿಯ ವೃಂದದಿ..
ಮೊಗದ ರೇಖಾಚಿತ್ರ ಕಂಡೆನು, ಸಂಜೆಗೆಂಪಿನ ವರ್ಣದಿ..||
ಎಳೆಯ ಹುಲ್ಲಿನ ಎಸಳು ಒಮ್ಮೆಲೇ, ತೂಗಿರಲು ವೈಯ್ಯಾರದಿ..
ಮೋಹಕುಂತಲ ಸೋಕಿ ಕೆನ್ನೆಗೆ, ಇಂದ್ರಜಾಲದ ವಾರಿಧಿ..||
ನಡೆವ ಹೆಜ್ಜೆಯೂ, ಇಣುಕಿ ನೋಡಿದೆ, ಚಡಪಡಿಸಿ ನಿನ್ನೂರಿಗೆ..
ದಡದ ಆಚೆಯೂ, ನೋಟ ಚಾಚಿದೆ, ಗಮ್ಯ ಯಾವುದು ದಾರಿಗೆ.?
ಸ್ವಪ್ನಬುತ್ತಿಯ ಹೊತ್ತು ತಂದಿಹೆ, ಹಂಚಲೋಸುಗ ನಿನ್ನಲೇ..
ಬಂದು ಬೇಗನೆ ತುತ್ತು ನೀಡುತ, ಬಾಚಿ ತಬ್ಬಿಕೋ ಕಣ್ಣಲೆ..||