Tuesday, November 19, 2013

ಕಾಲೇಜು ದಿನಗಳು...!! [ಭಾಗ-೪]

ಮೊದಲನೇ ದವನದಲ್ಲಿ ನನಗೆ ೨ ಪ್ರಶಸ್ತಿಗಳು ಬಂದಿದ್ದವು. ಪ್ರಶಸ್ತಿ ಪ್ರದಾನವು ಸಂಜೆ ನಡೆಯೋದಿತ್ತು. ಅದಕ್ಕಾಗಿ ಭವ್ಯ ವೇದಿಕೆ, ಬೃಹತ್ತಾದ ಸೌಂಡ್ ಸಿಸ್ಟಮ್ ಎಲ್ಲವೂ ತಯಾರಾಗಿತ್ತು.ಇಡೀ ಕಾಲೇಜು ವಿದ್ಯುದ್ದೀಪಗಳಿಂದ ಸಿಂಗರಿತವಾಗಿ, ಮದುವಣಗಿತ್ತಿಯಂತೆ ಹೊಳೆಯುತ್ತಿತ್ತು.! ಅದೇನೋ ಹಬ್ಬದ ವಾತಾವರಣ ಮನಸ್ಸಿನಲ್ಲೇ ಸೃಷ್ಟಿಯಾಗಿತ್ತು.. ಆ ಹೊತ್ತಿಗಾಗಲೇ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಎಲ್ಲರೂ ಬಂದು ಕುಳಿತಿದ್ದರು.

ಅವತ್ತಿನ ಮುಖ್ಯ ಆಕರ್ಷಣೆ ಅಂದ್ರೆ, ಅಂದು ಬರಲಿದ್ದ ಮುಖ್ಯ ಅತಿಥಿ. ಮುಂಗಾರು ಮಳೆಯ ಯಶಸ್ಸಿಗೆ ಮುಖ್ಯ ಕಾರಣಕರ್ತರುಗಳಲ್ಲಿ ಒಬ್ಬರಾದ, ಮನೋಜ್ಞ ಕವಿತೆಗಳನ್ನು ಕನ್ನಡಿಗರಿಗಾಗಿ ಬರೆದು ನೂತನ ಯುಗವನ್ನು ಸೃಷ್ಟಿಸಿದ ಶ್ರೀ ಜಯಂತ ಕಾಯ್ಕಿಣಿ..!! ನಾನೂ ಬಹಳಷ್ಟು ಉತ್ಸುಕನಾಗಿದ್ದೆ.. ದವನದ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿ ಸ್ವೀಕರಿಸುವೆನೆಂಬ ಹೆಮ್ಮೆಯೂ ಒಂದು ಕಡೆ.!

ಅವತ್ತು ಸಂಜೆ ಬಹುಶಃ ೬, ೬-೩೦ ಕ್ಕೆ ಕಾರ್ಯಕ್ರಮ ಆರಂಭವಾಯಿತು.. ಪ್ರಾರ್ಥನೆಯ ನಂತರ, ನಮ್ಮ ಕೃಷ್ಣನೇ ಸ್ವಾಗತ ಭಾಷಣ ಮಾಡಿದ. ಅಚ್ಚ ಕನ್ನಡದ ಅವನ ಸ್ವಾಗತ ಮನಸೂರೆಗೊಂಡಿತು.. ತದನಂತರ ಜಯಂತ ಕಾಯ್ಕಿಣಿಯವರ "ಅನಿಸುತಿದೆ ಯಾಕೋ ಇಂದು" ಹಾಡನ್ನು ವೇದಿಕೆಯ ಮೇಲೆ ನನ್ನ ಸ್ನೇಹಿತ ವಿಶ್ವೇಶ್ವರ ಮಧುರವಾಗಿ ಹಾಡಿದ. ಅವನಿಗೆ ಗೌತಮ್ ಮತ್ತು ಭರತೇಶ್ ಇಬ್ಬರೂ ಕೀಬೋರ್ಡ್ ನ ಸಹಾಯ ನೀಡಿದರು.. ಆಮೇಲೆ ಕಾಯ್ಕಿಣಿಯವರು ತಮ್ಮ ಅತಿಥಿ ಭಾಷಣವನ್ನು ಮಾಡಿದರು. ನಾಡಿನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಯುವಕರು ಮುನ್ನುಗ್ಗಬೇಕು ಎಂಬುದನ್ನು ರಸವತ್ತಾಗಿ ಹೇಳಿದರು.. 

ಎಲ್ಲರ ಭಾಷಣ ಮುಗಿದ ಮೇಲೆ, ಬಹುಮಾನ ವಿತರಣೆ ಆಗುವುದಿತ್ತು. ಎಲ್ಲರ ತರಹವೇ ನಾನೂ ಉತ್ಸಾಹದಿಂದ ವೇದಿಕೆಯ ಹತ್ತಿರ ನಿಂತಿದ್ದೆ. ಉಪನ್ಯಾಸಕರೊಬ್ಬರು ಒಂದೊಂದಾಗಿ ಎಲ್ಲ ಸ್ಪರ್ಧೆಗಳ ವಿಜೇತರುಗಳ ಪಟ್ಟಿಯನ್ನು ಓದುತ್ತ ಹೋದರು.. ನಾನೂ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಅದೊಂಥರಾ ಖುಷಿಯ ಸಂದರ್ಭ. ಸಾವಿರಾರು ಸ್ನೇಹಿತರ ಎದುರು ವೇದಿಕೆಯ ಮೇಲೆ ಬಹುಮಾನ ಹಿಡಿದುಕೊಳ್ಳುವುದು..!! ಆ ವರ್ಷ ನಗದು ಬಹುಮಾನವನ್ನು ಕೊಟ್ಟಿದ್ರು. ಮೊದಲನೇ ಸ್ಥಾನಕ್ಕೆ ೨೫೦, ಎರಡನೆಯದಕ್ಕೆ ೨೦೦, ಮತ್ತು ಮೂರನೆಯ ಬಹುಮಾನಕ್ಕೆ ೧೫೦ ರೂಗಳು. ನನಗೆ ಎರಡು ದ್ವಿತೀಯ ಬಹುಮಾನ ಬಂದಿದ್ರಿಂದ, ಒಟ್ಟು ೪೦೦ ರೂಗಳು ಸಿಕ್ಕಿದವು..!!

ಉಳಿದೆಲ್ಲ ಸ್ಪರ್ಧಾಕೂಟಗಳಲ್ಲಿ ಇರುವಂತೆ, ನಮ್ಮ ದವನದಲ್ಲೂ, ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗೆ ವಿಶೇಷವಾಗಿ "ದವನಶ್ರೀ" ಎಂಬ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗುತ್ತಿತ್ತು.. ದವನಕ್ಕೆ ಬರುವ ಬಹುತೇಕ ಎಲ್ಲರಿಗೂ, ಇಂಜಿನಿಯರಿಂಗ್ ನ ೪ ವರ್ಷಗಳಲ್ಲಿ ಒಮ್ಮೆಯಾದರೂ ಆ ದವನಶ್ರೀಯನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇರ್ತಿತ್ತು.. ಅದಕ್ಕಾಗಿ ಬಹಳಷ್ಟು ಕಸರತ್ತನ್ನೂ ನಡೆಸುತ್ತಿದ್ದರು.. ಈ ಮೊದಲನೇ ದವನದಲ್ಲಿ ಶಿವಮೊಗ್ಗದ JNNC ಕಾಲೇಜಿನ 'ಶೂನ್ಯಶ್ರೀ' ಎಂಬ ವಿದ್ಯಾರ್ಥಿನಿಗೆ ಆ ಪ್ರಶಸ್ತಿ ಲಭಿಸಿತ್ತು. ಆಕೆ ಅದ್ಭುತ ಚಿತ್ರಕಲಾ ಪ್ರವೀಣೆ. ಪೇಂಟಿಂಗ್,ರಂಗೋಲಿ,ಕೊಲಾಜ್, ಕಾರ್ಟೂನಿಂಗ್ ಇಲ್ಲೆಲ್ಲಾ ಉತ್ತಮ ಕಲಾಕೃತಿಗಳನ್ನು ರಚಿಸಿದ್ದರಿಂದ ಅವಳಿಗೆ ಆ ಯಶಸ್ಸು ದಕ್ಕಿತ್ತು..
ಇದರ ಜೊತೆಗೆ, ಅತೀ ಹೆಚ್ಚು ಬಹುಮಾನಗಳನ್ನು ಪಡೆದ ಕಾಲೇಜಿಗೂ "ಚಾಂಪಿಯನ್ ಪ್ರಶಸ್ತಿ"ಯನ್ನು ಕೊಡಲಾಗುತ್ತಿತ್ತು. ಅವತ್ತು ಬಳ್ಳಾರಿಯ RYMSC ಕಾಲೇಜು ಅತಿಹೆಚ್ಚು ಬಹುಮಾನಗಳನ್ನು ಗೆದ್ದು ಚಾಂಪಿಯನ್ ಆಗಿ ಆಯ್ಕೆಯಾಗಿತ್ತು.. ಆ ಕಾಲೇಜಿನ ಉಪನ್ಯಾಸಕರು, ಕೆಲವು ವಿದ್ಯಾರ್ಥಿಗಳು ವೇದಿಕೆಯ ಮೇಲೇರಿ ಪ್ರಶಸ್ತಿ ಸ್ವೀಕರಿಸುತ್ತಿದ್ದರೆ, ವೇದಿಕೆಯ ಕೆಳಗೆ ನಿಂತ ಆ ಕಾಲೇಜಿನ ಉಳಿದ ಹುಡುಗರು "RYMSC..RYMSC.." ಎಂದು ಸಂಭ್ರಮದಿಂದ ಕೇಕೆ ಹಾಕುತ್ತಿದ್ದರು..

ಹೀಗೆ ಔಪಚಾರಿಕ ಸಮಾರಂಭ ಮುಗಿದ ಮೇಲೆ, ನಿಜವಾದ ದವನದ ರಂಗು ಮೇಲೇರುವುದಿತ್ತು. ಹಾಡು, ನೃತ್ಯ, ನಾಟಕ ಹೀಗೆ ಹಲವಾರು ಕಾರ್ಯಕ್ರಮಗಳು ವೇದಿಕೆಯ ಮೇಲೆ ನಡೆಯೋದಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನನ್ನ ತಲೆನೋವು ಮಿತಿಮೀರಿತ್ತು. ನಿಲ್ಲುವುದಕ್ಕೂ ಆಗದ ಪರಿಸ್ಥಿತಿ. ಹೀಗಾಗಿ ಮನೆಗೆ ಹೊರಡಲು ನಿರ್ಧರಿಸಿದೆ. ಕೃಷ್ಣನಿಗೆ ತಿಳಿಸಿ, ನಾನು ಬಸ್ ಹತ್ತಿ ಮನೆಗೆ ವಾಪಸ್ಸಾದೆ.ಮನೆಗೆ ಬಂದವನೇ, ಬಂದಿದ್ದ ಬಹುಮಾನಗಳನ್ನು ಅಪ್ಪ-ಅಮ್ಮನಿಗೆ ತೋರಿಸಿದೆ. ಅವರೂ ಮನಸಾ ಖುಷಿ ಪಟ್ಟರು.. ತಲೆನೋವು ಎಷ್ಟೇ ಇದ್ದರೂ, ಮನಸ್ಸು ಮಾತ್ರ ಕುಣಿದಾಡುತ್ತಿತ್ತು..!!

ದವನ ಮುಗಿದ ಮೇಲೂ, ಎಷ್ಟೋ ದಿನ ಅದರ ಗುಂಗಿನಲ್ಲೇ ಇದ್ದೆ. ಪರಿಚಯವಾದ ಹೊಸ ಗೆಳೆಯರು, ಹೊಸ ಪ್ರತಿಭೆಗಳು ಇವುಗಳ ನೆನಪೇ ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಈ ಗುಂಗಿನಿಂದ ಹೊರ ಬರುವಷ್ಟರಲ್ಲಿ, ಎರಡನೇ ಸೆಮಿಸ್ಟರ್ ನ ಪರೀಕ್ಷೆಗಳು ಆರಂಭವಾಗಿಯೇ ಬಿಟ್ಟವು.. ಕೆಮಿಸ್ಟ್ರಿ,ಗಣಿತ ಹೊರತುಪಡಿಸಿದರೆ ಉಳಿದವೆಲ್ಲವೂ ನನಗೆ ಹೊಸ ವಿಷಯಗಳೇ. ಆದರೂ ಹೇಗೋ ಹಗಲು ರಾತ್ರಿ ಓದಿ ಪರೀಕ್ಷೆ ಬರೆದೆ..ಅಂತೂ ಎಲ್ಲ ನಿರಾಳವಾಗಿ ಮುಗಿಯಿತು. ಮುಂದಿನ ಸೆಮಿಸ್ಟರ್ ನಲ್ಲಿ ನಮ್ಮ ನಮ್ಮ ವಿಭಾಗಗಳಿಗೆ ಹೋಗಬೇಕಾಗಿತ್ತು. ಕಂಪ್ಯೂಟರ್ ಸೈನ್ಸ್ ಅನ್ನು, ಇನ್ನೂ ೩ ವರ್ಷ ಹೇಗೆ ಓದಿ ಪಾರುಮಾಡುವುದೆಂಬ ಒಂದು ಸಣ್ಣ ಅಳುಕು ಯಾವಾಗಲೂ ನನ್ನ ಮನದ ಮೂಲೆಯಲ್ಲಿ ಇದ್ದೆ ಇತ್ತು. ಆದರೂ, ರಜೆ ಪ್ರಾರಂಭವಾಗಿದ್ದರಿಂದ, ಎಲ್ಲ ಮರೆತು ಹಾಯಾಗಿರಲು ನಿರ್ಧರಿಸಿದೆ. ಗೆಳೆಯರನ್ನೆಲ್ಲ ಬೀಳ್ಕೊಟ್ಟು ರಜೆಯ ಮಜಾಕ್ಕೆ ಹೊರಡಲು ಅಣಿಯಾದೆ..!!


[ ಮುಂದುವರೆಯುವುದು... !! ]

Monday, November 11, 2013

ಕಾಲೇಜು ದಿನಗಳು...!! [ಭಾಗ-೩]

"ದವನ" ಅಂದಾಕ್ಷಣ ಈಗಲೂ ನನ್ನ ಕಣ್ಣುಗಳು ಅರಳಿತ್ತವೆ.. ಆ ಒಂದು ತಿಂಗಳ ತಯಾರಿ,ಓಡಾಟ, ಸದಾ ಹಾಸ್ಟೆಲ್ ನ ರೂಮುಗಳಲ್ಲಿ ಚರ್ಚೆ ಇವಾವುದನ್ನೂ ಮರೆಯಲು ಸಾಧ್ಯವೇ ಇಲ್ಲ..
"ದವನ", ನಮ್ಮ ಬಾಪೂಜಿ ಕಾಲೇಜಿನಲ್ಲಿ ನಡೆಯುವ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಹಬ್ಬ.. ಸಂಗೀತ,ನೃತ್ಯ,ಸಾಹಿತ್ಯ,ಅಭಿನಯ ಹೀಗೆ ಅನೇಕ ವಿಭಾಗಗಳಲ್ಲಿ ಹತ್ತಾರು ಸ್ಪರ್ಧೆಗಳು.. ಅದಕ್ಕಾಗಿ JNNC ಕಾಲೇಜು, RYMSC ಕಾಲೇಜು, UBDT ಕಾಲೇಜು, GMIT ಕಾಲೇಜು, AIT ಕಾಲೇಜು ಹೀಗೆ ರಾಜ್ಯದ ವಿವಿಧೆಡೆಯ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳೂ ಬರುತ್ತಿದ್ದರು.

ಈ "ದವನ" ಅನ್ನೋ ಹೆಸರು ಇದಕ್ಕೆ ಹೇಗೆ ಬಂತು ಅನ್ನೋದನ್ನ ಮೊದಲಿಗೆ ಹೇಳಲೇಬೇಕು. ಅನೇಕ ಜನರಿಗೆ,[ನನ್ನ ಕಾಲೇಜಿನ ಬಹಳಷ್ಟು ಮಂದಿಗೂ ಕೂಡ] ಅದರ ಮಾಹಿತಿ ಇರಲಿಲ್ಲ.
ನಮ್ಮ ದಾವಣಗೆರೆ ಗೆ, ದೇವನಗರಿ ಎಂಬ ಪ್ರಾಚೀನ ಹೆಸರಿದ್ದಿದ್ದು ಅನೇಕರಿಗೆ ಗೊತ್ತು. ಹಾಗೆಯೇ ಅದರ ಜೊತೆ "ದವನಗಿರಿ" ಎಂಬ ಹೆಸರೂ ಇತ್ತು. ಅಲ್ಲಿ ಹುಲುಸಾಗಿ ದವನದ ಸಸ್ಯ ಬೆಳೆಯುತ್ತಿದ್ದಿದ್ದು ಅದಕ್ಕೆ ಕಾರಣ. ದವನ ಒಂದು ಸುವಾಸಿತವಾದ ಸಸ್ಯಪ್ರಬೇಧ. (ಮರುಗದ ಎಲೆ ಗೊತ್ತಲ, ಅದೇ ಥರ). ಹೂವಿನ ಮಾಲೆಯ ನಡುವೆ, ಈ ದವನದ ಎಲೆಗಳನ್ನೂ ಜೋಡಿಸುತ್ತಾರೆ. ಸಾಮಾನ್ಯ ಸಸ್ಯಗಳಲ್ಲಿ ಹೂವು ಮಾತ್ರ ಸುಗಂಧಿತವಾಗಿದ್ದರೆ, ದವನದಲ್ಲಿ ಇಡೀ ಸಸ್ಯವೇ, ಕಾಂಡ ,ಎಲೆ ಎಲ್ಲವೂ ಸುವಾಸಿತ.. ಹೀಗಾಗಿ ಅದನ್ನೊಂದು ಸೂಚ್ಯವಾಗಿಟ್ಟುಕೊಂಡು, ಹೇಗೆ ದವನದ ಸಸ್ಯ ಸಂಪೂರ್ಣವಾಗಿ ಸುಗಂಧಿತವಾಗಿರುತ್ತದೆಯೋ, ಹಾಗೆಯೇ ವಿದ್ಯಾರ್ಥಿಗಳೂ ಕೂಡ ಕೇವಲ ತಾಂತ್ರಿಕವಾಗಿ ಅಲ್ಲದೆ, ಸಾಮಾಜಿಕ,ಸಾಂಸ್ಕೃತಿಕ ವಿಷಯಗಳಲ್ಲೂ ಪ್ರಬುದ್ಧರಾಗಿ ಪರಿಪೂರ್ಣವಾಗಿ ಬೆಳೆಯಬೇಕೆಂಬ ಆಶಯದಲ್ಲಿ ನಮ್ಮ ಕಾಲೇಜಿನ "ದವನ" ಮೂಡಿಬಂದಿತ್ತು.

ದಶಕದ ಹಿಂದೆ, ದವನದ ಕೀರ್ತಿ ಬಹಳವಾಗಿತ್ತು. ಆಗ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಕೆಲವೇ  'ರಾಜ್ಯಮಟ್ಟದ' ಕಾರ್ಯಕ್ರಮಗಳಲ್ಲಿ ಇದೂ ಒಂದು. ಆ ನಂತರ ಕಾಲಕ್ರಮೇಣ, ಹೊಸ ಹೊಸ ಕಾಲೇಜುಗಳು ಪ್ರಾರಂಭವಾಗಿ, ಎಲ್ಲರೂ ತಮ್ಮ ತಮ್ಮ ಕಾಲೇಜಿನಲ್ಲಿಯೇ ಕಾರ್ಯಕ್ರಮಗಳನ್ನು ಮಾಡಿಕೊಳ್ಳಲು ಶುರುವಾದಾಗಿನಿಂದ, ಹೊರ ಊರುಗಳಿಂದ ಬರುವ ಸ್ಪರ್ಧಿಗಳ ಸಂಖ್ಯೆ ಸ್ವಲ್ಪ ಕಮ್ಮಿಯಾಗಿತ್ತು. ಆದರೂ ದವನದ ಛಾಪು ಹಾಗೆಯೇ ಇತ್ತು.

ಇಂತಹ ದವನಕ್ಕೆ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳೆಲ್ಲ ಬರುತ್ತಿದ್ದುದರಿಂದ, ನಮ್ಮ ಕಾಲೇಜಿನಲ್ಲಿಯೂ ತಯಾರಿ ಜೋರಾಗಿಯೇ ಇರುತಿತ್ತು. ಹಾಗೆ ನೋಡೋದಾದ್ರೆ ಮೊದಲನೇ ವರ್ಷ ನಾನು ಈ ದವನದಲ್ಲಿ ಪೂರ್ಣವಾಗಿ ಭಾಗವಹಿಸಿರಲಿಲ್ಲ. ಪ್ರತಿನಿತ್ಯ ಹರಿಹರದಿಂದ ದಾವಣಗೆರೆಗೆ ಓಡಾಡುವುದರಲ್ಲಿಯೇ ದಣಿದು ಹೋಗುತ್ತಿದ್ದ ಕಾರಣ, ಮತ್ತೆ ಇದಕ್ಕಾಗಿ ಸಮಯ ಮೀಸಲಿಡುವುದು ಸಾಧ್ಯವಿರಲಿಲ್ಲ.. ಆದರೆ ಮನಸ್ಸು ಕೇಳಬೇಕಲ್ಲ.. ಹಾಡು,ಭಾಷಣ,ನಾಟಕಗಳಲ್ಲಿ ಅಪಾರ ಆಸಕ್ತಿಯಿದ್ದವನು ನಾನು.. ಹೀಗಾಗಿ ಭಾಷಣದ ಸ್ಪರ್ಧೆಗಳಲ್ಲಷ್ಟು ಭಾಗವಹಿಸಲು ತೀರ್ಮಾನಿಸಿದೆ.

ದವನದ ಸ್ಪರ್ಧೆಗೂ ಮುಂಚೆ, ನಮ್ಮ ಕಾಲೇಜಿನಲ್ಲೇ ವಿದ್ಯಾರ್ಥಿಗಳಿಗೆ ಆಡಿಶನ್ ನಡೆಸಲಾಗುತ್ತಿತ್ತು. ಅದರಲ್ಲಿ ಆಯ್ಕೆಯಾದವರನ್ನು ಮುಖ್ಯ ಸ್ಪರ್ಧೆಗೆ ಕಳಿಸುತ್ತಿದ್ದರು..ನನ್ನ ಮೊದಲನೇ ವರ್ಷದಲ್ಲಿಯೂ ಹೀಗೆ ಆಡಿಶನ್ ನಡೆಯಿತು.. ಬಹುಶಃ ಮೆಕ್ಯಾನಿಕಲ್ ಸೆಮಿನಾರ್ ಹಾಲ್ ನಲ್ಲಿ ಅಂತ ನೆನಪು.
ಡಾ.ಮುರುಗೇಶ್ ಬಾಬು ಸರ್, ಡಾ.ನಿರ್ಮಲಾ ಸಿ.ಆರ್ ಮೇಡಂ, ಚಿದಾನಂದಪ್ಪ ಸರ್, ಪ್ರಸನ್ನ ಸರ್, ಡಾ.ಸುಬ್ರಮಣ್ಯ ಸ್ವಾಮಿ ಸರ್ ಇಂತಹ ಅನೇಕ ಘಟಾನುಘಟಿಗಳ ಸಮ್ಮುಖದಲ್ಲಿ ನಾವು ಆಡಿಶನ್ ನೀಡುವುದಿತ್ತು.. 
ಮೊದಲಿಗೆ ಭಾವಗೀತೆ,ಜನಪದಗೀತೆ,ಚಲನಚಿತ್ರಗೀತೆ ಇವುಗಳ ಆಡಿಶನ್ ನಡೆಯಿತು. ನಾನೂ ಭಾಗವಹಿಸಿದ್ದೆ. ನಾನು ಸಂಗೀತವನ್ನೇನು ಅಭ್ಯಾಸ ಮಾಡಿಲ್ಲವಾದರೂ, ತಕ್ಕ ಮಟ್ಟಿಗೆ ಹಾಡುವ ರೂಢಿ ಇದೆ. ಆದರೆ ನನ್ನ ಸ್ನೇಹಿತರನೇಕರು ಸಂಗೀತಪರಿಣತರಿದ್ದರು.. ನನ್ನ ಆಯ್ಕೆಯಾಗುವುದಿಲ್ಲವೆಂದು ಗೊತ್ತಿದ್ದರೂ ಭಾಗವಹಿಸಿದ್ದೆ. ಶಾಸ್ತ್ರೀಯ ಸಂಗೀತದಲ್ಲಿ ನನ್ನ ಗೆಳೆಯ 'ವಿಶ್ವೇಶ್ವರ' ಆಯ್ಕೆಯಾದ.Instrumental Music ವಿಭಾಗದಲ್ಲಿ 'ಗೌತಮ್' ಆಯ್ಕೆಯಾದ. ಬೇರೆ ಗಾಯನ ಸ್ಪರ್ಧೆಗಳಲ್ಲಿ ಇನ್ನೂ ಕೆಲವರು ಆಯ್ಕೆಯಾದರು.ನಾನು ಪ್ರತ್ಯೇಕವಾದ ಗಾಯನದಲ್ಲಿ ಅಯ್ಕೆಯಾಗದಿದ್ದರೂ, ಸಮೂಹಗಾಯನದಲ್ಲಿ ಅಯ್ಕೆಯಾಗಿದ್ದೆ..!!

ಆನಂತರ ಕನ್ನಡ ಚರ್ಚಾ ಸ್ಪರ್ಧೆಯ ಆಡಿಶನ್ ಇತ್ತು. ನಾನು, ಕೃಷ್ಣ ಇನ್ನೂ ಅನೆಕರೂ ಬಂದಿದ್ರು. "ರಾಜಕೀಯದಲ್ಲಿ ಮಠಾಧೀಶರ ತೊಡಗುವಿಕೆ ಸರಿಯೋ ತಪ್ಪೋ" ಎಂಬ ವಿಷಯ ಕೊಡಲಾಗಿತ್ತು.ನಾನು ಪರವಾಗಿ ಮಾತನಾಡಿದೆ.ನಾನು ಮತ್ತು ಕೃಷ್ಣ ಅಂತಿಮವಾಗಿ ಆಯ್ಕೆಯಾದೆವು. ಕೃಷ್ಣ ಅದಾಗಲೇ ನಾಟಕ,ಮುಂತಾದವುಗಳ ತಯಾರಿಯನ್ನೂ ನಡೆಸಿದ್ದ.. ಆದರೆ ಮೊದಲನೇ ವರ್ಷ ಅವನ ತಂಡದೊಂದಿಗೆ ಸೇರಲು ನನಗೆ ಸಾಧ್ಯವಾಗಲಿಲ್ಲ.

ಇದರ ಜೊತೆ,ಇನ್ನೊಂದು ಸ್ಪರ್ಧೆಯೂ ಇತ್ತು. ಅದು 'ಕನ್ನಡ ಪುಸ್ತಕ ವಿಮರ್ಶೆ'.ಕನ್ನಡದ ಪ್ರಸಿದ್ಧ ಬರಹಗಾರರ ಪ್ರಸಿದ್ಧ ಕೃತಿಗಳನ್ನು ವಿಮರ್ಶಾತ್ಮಕವಾಗಿ ನಿರೂಪಿಸುವ ಸ್ಪರ್ಧೆ ಅದು. ದವನದ ಅನೇಕ ಅಪರೂಪದ ಸ್ಪರ್ಧೆಗಳಲ್ಲಿ ಇದೂ ಒಂದು.[VTU ನಡೆಸುವ ರಾಜ್ಯಮಟ್ಟದ 'Youth Fest'ನಲ್ಲಿ ಕೂಡ ಈ ಸ್ಪರ್ಧೆ ಇರೋದಿಲ್ಲ ]. ಆ ವರ್ಷ ನನ್ನ ನೆಚ್ಚಿನ ಭೈರಪ್ಪನವರ 'ಆವರಣ' ಕಾದಂಬರಿ, ಹಾಗು ಚಂದ್ರಶೇಖರ ಕಂಬಾರರ 'ಸೂರ್ಯಶಿಕಾರಿ' ಕೃತಿಗಳನ್ನು ವಿಮರ್ಶೆಗೆ ಇಡಲಾಗಿತ್ತು. ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾದಬಹುದಿತ್ತದರೂ, ನಾನು ಆವರಣವನ್ನು ಅದಾಗಲೇ ಓದಿದ್ದರಿಂದ ಅದನ್ನೇ ಆಯ್ದುಕೊಂಡೆ. ಈ ಸ್ಪರ್ಧೆಯಲ್ಲಿಯೂ ನಾನು ಆಯ್ಕೆಯಾದೆ.!!

ದವನ ಒಟ್ಟು ಮೂರು ದಿನದ ಕಾರ್ಯಕ್ರಮ. ಮೊದಲನೇ ದಿನ "ರೋಸ್ ಡೇ" ಅಂತ ಮಾಡ್ತಿದ್ರು.. ಅನೇಕರು ಒಂದೊಂದು ಬಗೆಯ ಶಾಪ್ ಗಳನ್ನು ತೆರೆದು ಮಾರಾಟ ಮಾಡುತ್ತಿದ್ದರು. ಅದೆಲ್ಲದಕ್ಕಿಂತ ಅವತ್ತಿನ ಆಕರ್ಷಣೆ ಅಂದ್ರೆ ರೋಸ್ ಸ್ಟಾಲ್. ಯಾರು ಬೇಕಾದರೂ, ಎಷ್ಟಾದರೂ ಹಣ ಕೊಟ್ಟು ಗುಲಾಬಿ ಖರೀದಿಸಿ, ಯಾರಿಗಾದರೂ ಕೊಡುವ ಪ್ರಕ್ರಿಯೆ ಅದು. ಇಡೀ ಕಾಲೇಜಿನ ಹುಡುಗರೆಲ್ಲಾ ಅಲ್ಲೇ ಇರ್ತಿದ್ರು. ಬಿಸಿ ಬಿಸಿ ಸುದ್ದಿಯ ಕುತೂಹಲದಲ್ಲಿ.!! ವೈಯಕ್ತಿವಾಗಿ ನನಗೆ ಇಂತಹ ಪ್ರಬುದ್ಧವಲ್ಲದ ನಡತೆಗಳು ಇಷ್ಟವಿಲ್ಲದಿದ್ದರೂ, ಮೊದಲನೇ ವರ್ಷ ಏನಿರಬಹುದೆಂದು ನೋಡಲು ಹೋಗಿದ್ದೆ. ಯಾರೋ ಒಬ್ಬಾತ ಸಾವಿರಾರು ರೂ ಕೊಟ್ಟು ಗುಲಾಬಿ ಖರೀದಿಸಿ, ಒಂದು ಹುಡುಗಿಗೆ ಕೊಟ್ಟ.. ಮತ್ತೊಬ್ಬ ತನ್ನ ಪ್ರೆಯಸಿಗೆಂದು ಯಾವುದೋ ಹಿಂದಿ ಹಾಡನ್ನು ಅರ್ಪಣೆ ಮಾಡಿದ್ದ..ಇಂತಹವು ಇನ್ನೂ ಹಲವಿದ್ದವು.. ಆನಂತರ ನಾನು ಮನೆಗೆ ವಾಪಸ್ಸಾದೆ..


ಮಾರನೆ ದಿನವೇ, ಎಲ್ಲ ಸ್ಪರ್ಧೆಗಳೂ ಪ್ರಾರಂಭವಾಗಲಿದ್ದವು..ಅವತ್ತು ನನ್ನ ಸ್ಪರ್ಧೆಗಳಾವುವೂ ಇರಲಿಲ್ಲ.. ಸಂಗೀತ ಸ್ಪರ್ಧೆಗಳು, ನಾಟಕ, ರಸಪ್ರಶ್ನೆ, ನೃತ್ಯ ಮುಂತಾದ ಸ್ಪರ್ಧೆಗಳಿದ್ದವು.. ಅವತ್ತಿನ ಏಕಪಾತ್ರಾಭಿನಯದಲ್ಲಿ ಒಬ್ಬ ಹುಡುಗ ನನ್ನ ದೃಷ್ಟಿ ಸೆಳೆದ. ಹೆಸರು "ಧೀಮಂತ". ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಿದ್ದ. ಅವನ ರಭಸ ಸಂಭಾಷಣೆ,ವಾಕ್ಪ್ರವಾಹ ಎಲ್ಲವೂ ಉತ್ತಮವಾಗಿತ್ತು.. ಸ್ಪರ್ಧೆಯ ನಂತರ ನಾನೇ ಹೋಗಿ ಮಾತನಾಡಿಸಿದೆ. ಶಿವಮೊಗ್ಗದ JNNC ಕಾಲೇಜಿನ ವಿದ್ಯಾರ್ಥಿ.ಸ್ವಲ್ಪ ಸಂಭಾಷಣೆಯಲ್ಲಿಯೇ ಅವನೂ ಒಬ್ಬ ರಾಷ್ಟ್ರೀಯತೆಯ ಚಿಂತಕ ಅನ್ನೋದು ತಿಳಿಯಿತು. ನನಗಂತೂ ಅಷ್ಟು ಸಾಕಾಗಿತ್ತು ಅವನ ಸಖ್ಯಕ್ಕೆ. ಅವತ್ತು ಆರಂಭವಾದ ಆ ಸ್ನೇಹ ಇನ್ನೂ ದೃಢವಾಗಿದೆ. ವರ್ಷಕ್ಕೊಮ್ಮೆ ಅಷ್ಟೇ ನಾವು ಭೇಟಿಯಗುತ್ತಿದ್ದರೂ ಸ್ನೇಹದ ಪ್ರಖರತೆ ಮಾತ್ರ ನಿರಂತರವಾಗಿದೆ..!!

ಮರುದಿನ ನನ್ನ ಭಾಷಣ ಸ್ಪರ್ಧೆಗಳಿದ್ದವು.ಬೆಳಿಗ್ಗೆ ಚರ್ಚಾ ಸ್ಪರ್ಧೆ ಇತ್ತು.. ಆಗ ಆರ್ಥಿಕ ಹಿಂಜರಿತ ಜೋರಾಗಿದ್ದಿದ್ದರಿಂದ, ಅದರ ವಿಷಯವಾಗಿಯೇ ಇತ್ತು. ಧೀಮಂತನೂ ಸ್ಪರ್ಧಿಯಾಗಿ ಬಂದಿದ್ದ..ಸ್ಪರ್ಧೆಯ ಕೊನೆಗೆ ಧೀಮಂತನಿಗೆ ಮೊದಲ ಬಹುಮಾನ, ನನಗೆ ದ್ವಿತೀಯ ಬಹುಮಾನ ಬಂದಿತ್ತು. ಅದಾದ ನಂತರ ಪುಸ್ತಕ ವಿಮರ್ಶೆಯ ಸ್ಪರ್ಧೆಯಿತ್ತು.. ಇಲ್ಲಿ ಇನ್ನೊಬ್ಬ ಅದ್ಭುತ ಗೆಳೆಯ ದೊರಕಿದ. ಹೆಸರು "ಗಣೇಶ ಕೊಪ್ಪಳತೋಟ".ದಾವಣಗೆರೆಯ UBDT ಕಾಲೇಜಿನ ವಿದ್ಯಾರ್ಥಿ. ಅದ್ಭುತ ಕನ್ನಡ ಪಂಡಿತ. ಛಂದೋಬದ್ಧವಾದ ಪದ್ಯಗಳನ್ನು ಬರೆಯುವುದರಲ್ಲಿ ನಿಸ್ಸೀಮ. ಅವಧಾನ ಕಳೆಯಲ್ಲಿಯೂ ಜ್ಞಾನ ಉಳ್ಳ ವ್ಯಕ್ತಿ.ಅವನ ಭೇಟಿಯ ನಂತರವೇ ನಾನೂ ಷಟ್ಪದಿಯಂತಹ ಛಂದೋಬದ್ಧ ಪ್ರಯೋಗಗಳನ್ನು ಶುರು ಮಾಡಿದ್ದು. ಆ ಸ್ಪರ್ಧೆಯಲ್ಲಿ ಗಣೇಶನಿಗೆ ಮೊದಲ ಬಹುಮಾನ, ನನಗೆ ದ್ವಿತೀಯ ಮತ್ತು ಧೀಮಂತನಿಗೆ ತೃತೀಯ ಬಹುಮಾನ ಲಭಿಸಿತ್ತು..

ಬಹುಮಾನಗಳ ವಿತರಣೆ, ಆ ದಿನ ಸಂಜೆಗೆ ನಡೆಯೋದಿತ್ತು.. ಎರಡು ದಿನಗಳ ತಿರುಗಾಟದಿಂದ ವಿಪರೀತ ತಲೆನೋವು ಬೇರೆ. ಗ್ರಂಥಾಲಯದ ಓದುವ ಕೋಣೆಯಲ್ಲಿ ನಾನು ತಲೆಯೂರಿ ಮಲಗಿದ್ದೆ. ಪಕ್ಕದಲ್ಲಿದ್ದ ದೊಡ್ಡ ಮೈದಾನದಲ್ಲಿ ಸಂಜೆಯ ವರ್ಣರಂಜಿತ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿತ್ತು..


[ ಮುಂದುವರೆಯುವುದು....]