Tuesday, August 13, 2013

ಕಾಲೇಜು ದಿನಗಳು...! [ಭಾಗ ೨]

ಎರಡನೇ ಸೆಮಿಸ್ಟರ್ ನಲ್ಲಿ ಕೊಠಡಿಗಳು ಬದಲಾಗಿದ್ದವು. ಬಯೋಮೆಡಿಕಲ್ ವಿಭಾಗದ, ಅಥವಾ ಸಿವಿಲ್ ವಿಭಾಗದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಇದು ಕೆಮಿಸ್ಟ್ರಿ ಸೈಕಲ್ ಆಗಿದ್ದರಿಂದ, ಈ ಸೆಮಿಸ್ಟರ್ ನಲ್ಲಿ ಕಂಪ್ಯೂಟರ್ ಸೈನ್ಸ್ ನ ವಿಷಯವೂ ಇತ್ತು.
ಸತ್ಯವಾಗಲೂ, ನನಗೆ ಕಂಪ್ಯೂಟರ್ ನ ಬಗ್ಗೆ ಗಂಧ-ಗಾಳಿಯೂ ಗೊತ್ತಿರಲಿಲ್ಲ. ಬಹುಶಃ ಅನೇಕರು ನಗಬಹುದು, ನಾನು ಇಂಜಿನಿಯರಿಂಗ್ ಸೇರಿದಾಗ, ನನಗೆ ಕಂಪ್ಯೂಟರ್ ಅನ್ನು ಆನ್ ಮಾಡೋದು ಹೇಗೆ ಅನ್ನೋದು ಕೂಡ ಗೊತ್ತಿರಲಿಲ್ಲ. ಆದರೂ ಸಿ.ಇ.ಟಿ ನಲ್ಲಿ ಅದ್ಹೇಗೆ "ಕಂಪ್ಯೂಟರ್ ಸೈನ್ಸ್" ಆಯ್ಕೆ ಮಾಡಿದ್ದೇನೋ ಗೊತ್ತಿಲ್ಲ..

ಮೊತ್ತಮೊದಲ ಗಣಕಯಂತ್ರದ ಲ್ಯಾಬ್ ನಲ್ಲಿ, ಒಂದು ಸಣ್ಣ "word document" ತಯಾರಿಸಲು ಹೇಳಿದರು. ನನ್ನ ಜೊತೆಗಿದ್ದವರು ಪಟಪಟನೆ ಕೀಪ್ಯಾಡ್ ಕುಟ್ಟುತ್ತಿದ್ದರೆ, ನನಗೆ ಏನೂ ಮಾಡಲು ತೋಚದೆ ಸುಮ್ಮನೆ ಕುಳಿತಿದ್ದೆ.. ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಆತ್ಮೀಯ ಗೆಳೆಯ "ಹರ್ಷ", ಅದನ್ನು ಆನ್ ಮಾಡಿಕೊಟ್ಟು, ಹೇಗೆ ಡಾಕ್ಯುಮೆಂಟ್ ಮಾಡೋದು ಅಂತ ಹೇಳಿಕೊಟ್ಟ. ಆದರೂ ಅಂಬೆಗಾಲಿಡುವ ಮಗುವಿನಂತೆ ಒಂದೊಂದೇ ಅಕ್ಷರಗಳನ್ನು ಒತ್ತುತ್ತಾ ಹೇಗೋ ಮುಗಿಸಿದೆ. ಆದರೆ ಅವತ್ತೇ ಭಯ ಆವರಿಸಿತು. ಏನೂ ಗೊತ್ತಿಲ್ಲದ ಈ ಕಂಪ್ಯೂಟರ್ ವಿಷಯದಲ್ಲೇ ಇನ್ನು ಮುಂದಿನ ೩ ವರ್ಷ ಕಳೆಯಬೇಕಲ್ಲ..ಇದು ನನ್ನಿಂದ ಸಾಧ್ಯವೇ, ಎಂಬ ದಿಗಿಲು. ಅವತ್ತು ಮನೆಗೆ ಹೋಗಿ ಮಂಕಾಗಿ ಕೂತಿದ್ದೆ. ಅಕ್ಷರಶಃ ಕಣ್ಣು ತುಂಬಾ ನೀರಿತ್ತು.. ಆದರೆ ಸ್ನೇಹಿತರೆಲ್ಲರ ಧೈರ್ಯದ ಮಾತುಗಳಿಂದ ಸ್ವಲ್ಪ ಸಮಾಧಾನವಾಗಿತ್ತು..
ಆದರೆ, ನಾನು ಕಂಪ್ಯೂಟರ್ ಅನ್ನು ಹೆಚ್ಚು ಅಭ್ಯಾಸ ಮಾಡಬೇಕಾದ್ದು ಅನಿವಾರ್ಯವಾಗಿತ್ತು. ಆ ಮೊದಲನೇ ಇಂಟರ್ನಲ್ ನಲ್ಲಿ ಕಂಪ್ಯೂಟರ್ ವಿಷಯದಲ್ಲಿ ನನಗೆ ಬಂದ ಅಂಕಗಳು ೮.. ತರಗತಿಯ ಟಾಪರ್ ಆಗಿ, ಇಂಥಾ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ. ಅವತ್ತೇ ಕಂಪ್ಯೂಟರ್ ಒಂದನ್ನು ಖರೀದಿಸಲು ತೀರ್ಮಾನಿಸಿದೆ..
ಡೆಸ್ಕ್ಟಾಪ್ ತೊಗೊಂಡ್ರೆ ಮನೆತುಂಬಾ ಜಾಗ ಹಿಡಿಯುತ್ತೆ ಅಂತ, ಲ್ಯಾಪ್-ಟಾಪ್ ಅಂತ ನಿರ್ಧರಿಸಿದೆ. ಬೆಂಗಳೂರಿನಲ್ಲಿರುವ ನನ್ನ ಭಾವ [ ಶ್ರೀ.ಜಯತೀರ್ಥ ಕಟ್ಟಿ ], ಆ ವಿಷಯವಾಗಿ ಬಹಳ ಸಹಕರಿಸಿದರು. ಕೊನೆಗೂ ಅವರ ಸಹಾಯದಿಂದ "DELL Vostro" ಲ್ಯಾಪ್-ಟಾಪ್ ತೊಗೊಂಡು ಮನೆಗೆ ಬಂದೆ. 120 GB, 1 GB ನಷ್ಟು configuration  ಇದ್ದ ಆ ಗಣಕಯಂತ್ರ, ಆಗ ನನ್ನ ಪಾಲಿನ ಸಕಲವೂ ಅದೇ ಆಗಿತ್ತು.. ಆಗ ಕೇವಲ ತರಗತಿಯಲ್ಲಿ ಹೇಳಿಕೊಟ್ಟ ಪ್ರೊಗ್ರಾಮ್ ಗಳನ್ನು ಕಲಿಯಲು ಪ್ರಾರಂಭಿಸಿದೆ..
ಆಗ, ಕಂಪ್ಯೂಟರ್ ವಿಷಯವನ್ನು ಚೆನ್ನಾಗಿ ಹೇಳಿಕೊಟ್ಟವನು, "ಸಂದೀಪ ಎಸ್.ಎಚ್"..ಅವನಿಗೆ ಆ ವಿಷಯದ ಒಳಹೊರಗು ಬಹುತೇಕ ಗೊತ್ತಿತ್ತು..ಕಾಲೇಜಿನಲ್ಲಿ ಸಮಯ ಸಿಕ್ಕಾಗಗಲೆಲ್ಲ ನನಗೆ ಪ್ರೊಗ್ರಾಮ್ ಗಳನ್ನೂ ಅರ್ಥ ಮಾಡಿಸುತ್ತಿದ್ದ.. ಅವನ ಆ ಬೋಧನೆ ಬಹಳಷ್ಟು ಮನದಟ್ಟು ಮಾಡಿತು..!!

ಈ ಸಂದರ್ಭದಲ್ಲಿ ನಾನು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು..
"ಕೃಷ್ಣ ಹುಯಿಲಗೋಳ್"-ನಾನೆಂದೂ ಮರೆಯಲಾಗದ ವ್ಯಕ್ತಿಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಕೃಷ್ಣ ಅರ್ಜುನನ ಸಾರಥಿಯಾದಂತೆ, ನನ್ನ ಇಂಜಿನಿಯರಿಂಗ್ ಬದುಕಿನಲ್ಲಿ ಈ ಕೃಷ್ಣ ನನ್ನ ಮಾರ್ಗದರ್ಶಕನಾಗಿದ್ದ.. ಹಾಗೆ ನೋಡೋದಾದ್ರೆ, ಇವನು ನನಗೆ ದೂರದ ಸಂಬಂಧಿಯಾಗಿದ್ದರೂ, ಒಂದೇ ಊರಿನಲ್ಲಿದ್ದರೂ, ಯಾವುದೋ ಕೆಲವು ಸಮಾರಂಭಗಳಲ್ಲಷ್ಟೇ ಭೇಟಿಯಾಗುತ್ತಿತ್ತು. ಅವನ ಆತ್ಮೀಯ ಒಡನಾಟ ಶುರುವಾಗಿದ್ದೇ ಬಾಪೂಜಿ ಕಾಲೇಜ್ ಸೇರಿದ ನಂತರ..
ಇವನದು "Information Science" ವಿಭಾಗ. ವಿಭಾಗ ಬೇರೆ ಇದ್ದರೂ, ವಿಷಯಗಳು ಬಹುತೇಕ ವಿಷಯಗಳು ಒಂದೇ ಆಗಿದ್ದರಿಂದ, ನನ್ನ ಪಠ್ಯಪುಸ್ತಕಗಳ ಪ್ರಾಯೋಜಕನೂ ಅವನೇ ಆಗಿದ್ದ.. ಅದಕ್ಕಾಗಿ ಸದಾ ಅವನಿಗೆ ಋಣಿ..ನನ್ನ ಲ್ಯಾಪ್-ಟಾಪ್ ಗೆ ಬೇಕಾದ ಎಲ್ಲ ತಂತ್ರಾಂಶಗಳನ್ನು ಅದರಲ್ಲಿ ಅಳವಡಿಸಿಕೊಟ್ಟಿದ್ದೂ ಕೃಷ್ಣನೇ. ತೊಂದರೆ ಬಂದಾಗೆಲ್ಲಾ ಅವನ ಮನೆಗೆ ಓಡಿಹೊಗುತ್ತಿದ್ದೆ..

ಎಲ್ಲಕ್ಕಿಂತ ಮುಖ್ಯವಾಗಿ, ನನಗೆ ಕನ್ನಡದ ಬರವಣಿಗೆಯಲ್ಲಿ ಈ ಮಟ್ಟಿಗಿನ ಉತ್ಸಾಹಕ್ಕೆ ಕಾರಣನೂ ಇವನೇ.. ನಮ್ಮ ಕೃಷ್ಣ ಅಧ್ಬುತ ಕವಿ. ಪ್ರಣಯದ,ಪ್ರಕೃತಿಯ ವರ್ಣನಾತ್ಮಕವಾದ ಅದೆಷ್ಟೋ ಕವಿತೆಗಳನ್ನು ಬರೆದಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕನ್ನಡ ಸಾಹಿತ್ಯವನ್ನು ವಿಮರ್ಶಿಸುವ ತಾಕತ್ತೂ ಇದೆ.. ನಾನು ಕನ್ನಡದ ಅಭಿಮಾನಿಯಾಗಿದ್ದೆನಾದರೂ, ಹೀಗೆ ಕಥೆ,ಲೇಖನ, ಕವನಗಳನ್ನೂ ಎಂದೂ ಬರೆದವನಲ್ಲ.. ಹಾಗೆ ಬರೆಯಲು ಸ್ಫೂರ್ತಿಯೇ ಈ ಕೃಷ್ಣ..ಕಾಲೇಜು ಸೇರುವಾಗಿನಿಂದ ಹಿಡಿದು, ಈಗಲೂ ಸದಾ ನನ್ನ ಬೆಂಬಲಕ್ಕೆ ನಿಲ್ಲುವ ವ್ಯಕ್ತಿ ಈ ಕೃಷ್ಣ..

ಈ ಕೃಷ್ಣನ ಜೊತೆ ಮತ್ತೊಬ್ಬ ಹಿರಿಯ ವಿದ್ಯಾರ್ಥಿಯ ಪರಿಚಯವಾಯಿತು.. ಅವನ ಹೆಸರು "ಮಿತೇಶ್".
ಮಿತೇಶ್ ನನ್ನದೇ ಕಂಪ್ಯೂಟರ್ ವಿಭಾಗದಲ್ಲಿ, ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿ.. ಅವನು, ನಮ್ಮ ಕೃಷ್ಣ ಒಳ್ಳೆಯ ಗೆಳೆಯರು. ಅಲ್ಲದೆ, ನನ್ನದೇ ವಿಭಾಗದ ವಿದ್ಯಾರ್ಥಿಯ ಪರಿಚಯವಾಗಿದ್ದು ನನಗೂ ತುಂಬಾ ಸಂತಸ ತಂದಿತ್ತು. ಮುಂದೆ ಕಂಪ್ಯೂಟರ್ ವಿಭಾಗಕ್ಕೆ ಹೋದ ಮೇಲೆ, ಈ ಮಿತೇಶ್ ನ ಸಹಾಯವೂ ಅಪಾರ..!!

ಅಂದಹಾಗೆ, ಇವನ ಪರಿಚಯ ಆಗಲಿಕ್ಕೆ ಕಾರಣ ನಮ್ಮ ಕಾಲೇಜಿನ ಒಂದು ಸಾಂಸ್ಕೃತಿಕ ಹಬ್ಬ "ದವನ".
ದವನ ಎಂದ ತಕ್ಷಣ ನನಗಂತೂ ಮೈ ನವಿರೇಳುತ್ತದೆ. ಕೇವಲ ನನಗಷ್ಟೇ ಅಲ್ಲ, ಅದರಲ್ಲಿ ಪಾತ್ರವಹಿಸಿದ ಎಲ್ಲರಿಗೂ ದವನ ಅಂದರೆ ಮರೆಯಲಾಗದ ನೆನಪುಗಳ ಭಂಡಾರ..ದವನದಿಂದ ನಾವು ಕಲಿತಿದ್ದು ಅದೆಷ್ಟೋ, ಸ್ನೇಹಿತರಾದವರೆಷ್ಟೋ, ಮಾಡಿದ ತಮಾಷೆಯೇಷ್ಟೋ.,ಅಬ್ಬಾ..!!
ಅದರ ಬಗ್ಗೆನೇ ಮುಂದಿನ ಭಾಗದಲ್ಲಿ ಪೂರ ಹೇಳ್ತೀನಿ...!!



[ ಮುಂದುವರೆಯುವುದು....]

Monday, August 5, 2013

ಕಾಲೇಜು ದಿನಗಳು...! [ಭಾಗ ೧]

[ ಕೇವಲ ನಾಲ್ಕು ಸೆಕೆಂಡುಗಳಂತೆ ಸಂದು ಹೋದ ಇಂಜಿನಿಯರಿಂಗ್ ನ ಈ ನಾಲ್ಕು ವರ್ಷಗಳು, ಅನನ್ಯ ಅನುಭವದ ಗೂಡು. ಹೀಗೊಮ್ಮೆ ಅತೀತಕಾಲದೆಡೆ ತಿರುಗಿನೋಡಿ, ಸಾಗಿಬಂದ ರಸ್ತೆಯಲ್ಲಿ ಅವಿತಿಟ್ಟುಕೊಂಡಿರುವ ನೆನಪುಗಳನ್ನೆಲ್ಲ ಕೆದಕಿ ಹೊರತೆಗೆದು ನೀರು ಚಿಮುಕಿಸಿದಾಗಲೆಲ್ಲಾ, ಮತ್ತೆ ಮತ್ತೆ ಅನಿರ್ವಚನೀಯ ಆನಂದವೊಂದು ಮೊಳಕೆಯೊಡೆಯುತ್ತದೆ. ಆ ಮೊಳಕೆಯೊಡೆದ ಆನಂದದ ನೆರಳಿನಲ್ಲಿ ಕೂತು, ಈ ನಾಲ್ಕುವರ್ಷಗಳನ್ನು ನೋಡಿದರೆ, ಪ್ರತಿದಿನ, ಪ್ರತಿಕ್ಷಣವೂ ವಿಶಿಷ್ಟವಾಗಿ ಗೋಚರಿಸುತ್ತವೆ.
ಆ ಅವಿಸ್ಮರಣೀಯ ಘಟನಾವಳಿಗಳ ತುಣುಕುನೋಟವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನವಿದು..
ಈ ನಾಲ್ಕುವರ್ಷಗಳ ಅವಧಿಯಲ್ಲಿ ಜೊತೆಗಿದ್ದು ಹೆಗಲುಕೊಟ್ಟ ಎಲ್ಲರಿಗೂ ಈ ಸರಣಿಲೇಖನ ಅರ್ಪಣೆ..
ಈ ಲೇಖನಮಾಲೆಯ ಓದುವಿಕೆಯಿಂದ, ನನ್ನ ಗೆಳೆಯರ ವಿದ್ಯಾಥಿಜೀವನದ ನೆನಪುಗಳು ಮನದಾಳದಲ್ಲಿ ಮರುಕಳಿಸಿದರೆ, ಅದೇ ನನ್ನ ಬರಹದ ಸಾರ್ಥಕತೆ.!! ]

-------------------------------------------------------------------------------------------------------------

ಅವತ್ತು ಸೆಪ್ಟೆಂಬರ್ 4-2008. ಬಾಪೂಜಿ ಕಾಲೇಜಿನಲ್ಲಿ ನನ್ನ ಇಂಜಿನಿಯರಿಂಗ್ ವ್ಯಾಸಂಗ ಪ್ರಾರಂಭವಾದ ದಿನವದು. ಬೆಳಗಿನ ನಸುಕಿನಲ್ಲಿ, ಭವಿಷ್ಯದ  ಹೊಸ ಕನಸುಗಳ ಬ್ಯಾಗನ್ನು ಹೊತ್ತು ಬಸ್ಸಿಗಾಗಿ ದಾರಿ ಕಾಯುತ್ತಿದ್ದ ಕ್ಷಣ ಇನ್ನೂ ಸ್ಮೃತಿಪಟಲದಲ್ಲಿದೆ.. [ ಆಗಿನ್ನೂ ನಾನು 'ಹ್ಯಾಪಿಡೇಸ್' ಸಿನೆಮಾ ನೋಡಿರಲಿಲ್ಲ. ಅಕಸ್ಮಾತ್ ನೋಡಿದ್ದಿದ್ರೆ ಇನ್ನೂ ಬಗೆಬಗೆಯ  ಕನಸುಗಳೂ ಇರ್ತಿದ್ವೇನೋ..!!].. ಅಂತೂ ನನ್ನ ವಿದ್ಯಾರ್ಥಿಜೀವನದ ಮತ್ತೊಂದು ಮಜಲಿನ ದರವಾಜು ನನ್ನ ಬರುವಿಕೆಗಾಗಿ ಕಾದು ನಿಂತಿತ್ತು..

ಆ ಬಸ್ಸನ್ನು ನಾನು ಮರೆಯುವಂತೆಯೇ ಇಲ್ಲ.. ನಾನೊಬ್ಬನೇ ಅಲ್ಲ, ಹರಿಹರದಿಂದ ಓಡಾಡುವ ಯಾವ  ಇಂಜಿನಿಯರಿಂಗ್ ವಿದ್ಯಾರ್ಥಿಯೂ ಆ ಬಸ್ಸನ್ನ ಮರೆಯಲು ಸಾಧ್ಯವಿಲ್ಲ.  'ಚಿಕ್ಕಬಿದರಿ' ಗ್ರಾಮದಿಂದ ದಾವಣಗೆರೆಗೆ ಹೋಗುವ ನೀಲಿ-ಬಿಳಿ ಬಣ್ಣ ಮಿಶ್ರಿತ, ಗ್ರಾಮಾಂತರ ಸಾರಿಗೆಯ ಬಸ್ಸದು. ಇಂಜಿನಿಯರಿಂಗ್ ಹುಡುಗರ ಮತ್ತು ಸಾರಿಗೆ ಸಂಸ್ಥೆಯವರ ಒಪ್ಪಂದದ ಮೇರೆಗೆ, ಅದೊಂದು ಬಸ್ಸು ಬೆಳಗಿನ ಮೊದಲ ಟ್ರಿಪ್ ಅನ್ನು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿತ್ತು.. ಪ್ರತಿದಿನ ಸುಮಾರು 7-15 ರ ಹೊತ್ತಿಗೆ ಹರಿಹರದ ಎಲ್ಲ ಅಭಿಯಂತರರನ್ನು ತುಂಬಿಸಿಕೊಂಡು, ನೇರ ನಮ್ಮ ಬಾಪೂಜಿ ಕಾಲೇಜಿನ ಗೇಟಿನ ಬಳಿಗೆ ನಿಲ್ಲುತ್ತಿತ್ತು.. ಹೀಗಾಗಿಯೇ, ಆ ಬಸ್ಸನ್ನೇ ಹಿಡಿಯಲು ಶತಾಯ-ಗತಾಯ ಪ್ರಯತ್ನಿಸುತ್ತಿದ್ದೆವು.. ಜೊತೆಗೆ ಆ ಬಸ್ಸು ಹೋಗುವಾಗ, ನಮ್ಮ ಮನೆಯ ಹತ್ತಿರದ ಮುಖ್ಯರಸ್ತೆಯಲ್ಲಿಯೇ ಹೋಗಬೇಕಾದ್ದರಿಂದ, ನನಗೆ ಬಸ್ಸು ಹಿಡಿಯುವುದು ಅಷ್ಟೊಂದು ಕಷ್ಟವಾಗಿರಲಿಲ್ಲ.. ಆದರೂ ಈ ಬಸ್ಸು ಹಿಡಿಯುವ ಉತ್ಸಾಹ ಮೊದಲೆರಡು ವರ್ಷದಲ್ಲಿದ್ದಂತೆ ಕೊನೆವರೆಗೂ ಇರಲಿಲ್ಲ. 5 ನೆ ಸೆಮಿಸ್ಟರ್ ನಿಂದಂತೂ ಒಮ್ಮೆಯೂ ಆ ಬಸ್ಸನ್ನು ಹತ್ತಲೇ ಇಲ್ಲ.. ಮನಸ್ಸಿಗೆ ಬಂದ ಸಮಯಕ್ಕೆ, ಸಿಕ್ಕ ಬೇರೆ ಬಸ್ಸನ್ನು ಹಿಡಿದು ಹೋಗುವುದೇ ರೂಢಿಯಾಗಿತ್ತು.. ಇದು ನನ್ನೊಬ್ಬನ ಪಾಡಲ್ಲ... ಹರಿಹರದ ಎಲ್ಲ ವಿದ್ಯಾರ್ಥಿಗಳೂ ಎರಡು ವರ್ಷಗಳ ನಿರಂತರ ಓಡಾಟದಿಂದ ಬೇಸತ್ತು ಬದಲಾಗುವ ಪರಿಯಿದು..!!!


ಮೊದಲನೇ ದಿನ, ಕಾಲೇಜಿನಲ್ಲಿ ಕಾಲಿಟ್ಟಾಗ ನನ್ನ ತರಹವೇ, ಯಾವುದೋ ಲೋಕಕ್ಕೆ ಬಂದಂತೆ ದಿಗ್ಭ್ರಾಂತರಾಗಿ ನಿಂತಿದ್ದ ಹುಡುಗ-ಹುಡುಗಿಯರ ದಂಡೇ ನೆರೆದಿತ್ತು.. ಅಲ್ಲೊಂದಿಷ್ಟು ಪರಿಚಯ, ನಗುವಿನ ವಿನಿಮಯ ಹಾಗೇ ನಡೆದಿತ್ತು..
ಅಲ್ಲಿನ ಸಿಬ್ಬಂದಿಯೊಬ್ಬನ ಸೂಚನೆಯ ಮೇರೆಗೆ, ಎರಡನೇ ಅಂತಸ್ತಿನಲ್ಲಿದ್ದ, "ಸೆಮಿನಾರ್ ಹಾಲ್" ಗೆ ಹೋಗಿ ಕುಳಿತೆವು..ಹಾಗೆ ನೋಡೋದಾದ್ರೆ, ಹರಿಹರದಿಂದ ಬಂದಿದ್ದ ಒಂದಿಷ್ಟು ಗೆಳೆಯರನ್ನು ಬಿಟ್ರೆ, ಉಳಿದವರೆಲ್ಲ ಅಪರಿಚಿತರೇ. ಯಾರೊಬ್ಬರ ಮುಖಪರಿಚಯ ಕೂಡ ಇರಲಿಲ್ಲ..!! ಹಾಗೇ ಒಮ್ಮೆ ಎಲ್ಲ ಕಡೆ ಕಣ್ಣು ಹಾಯಿಸುತ್ತಿರುವಾಗಲೇ, ಒಮ್ಮೆಲೇ ಎಲ್ಲರೂ ಎದ್ದು ನಿಂತರು.. ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ನಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡಲು, ಕಾಲೇಜಿನ ಪ್ರಾಂಶುಪಾಲರು ಬರುತ್ತಿರುವುದು ಗೋಚರಿಸಿತು..

"ಡಾ.ಬಿ.ಟಿ.ಅಚ್ಯುತ" -- ಬಹುಶಃ ಇಂಥಾ ಒಬ್ಬ ಅದ್ಭುತ ಪ್ರಾಂಶುಪಾಲರನ್ನು ನಾನು ಹಿಂದೆಯೂ ನೋಡಿಲ್ಲ, ಮುಂದೆಯೂ ನೋಡಲು ಸಾಧ್ಯವಿಲ್ಲ.. ಸುಮಾರು ೬೫ ರ ಮೇಲಿನ ವಯಸ್ಸಾಗಿದ್ದರೂ, ಅದೇ ತಾರುಣ್ಯ,ಲವಲವಿಕೆ, ಸದಾ ಮುಖದಲ್ಲೊಂದು ಮೃದುನಗೆ, ಯಾವುದೇ ವರ್ಷದ,ಯಾವುದೇ ವಿಭಾಗದ ವಿದ್ಯಾರ್ಥಿಯಾಗಿರಲಿ ಎಲ್ಲರೊಂದಿಗೂ ಅಷ್ಟೇ ಆತ್ಮೀಯತೆಯ ಒಡನಾಟ, ಯಾರೊಬ್ಬರಿಗೂ ಕಟುವಾಗಿ ನಿಂದಿಸದ ಸೌಮ್ಯತೆ, ವಿದ್ಯಾರ್ಥಿಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಪ್ರಾಂಶುಪಾಲರು ಬಹುಬೇಗ ಎಲ್ಲರನ್ನೂ ಆಕರ್ಷಿಸುತ್ತಿದ್ದರು.. ಪ್ರಿನ್ಸಿಪಾಲ್ ಅಂದ್ರೆ ಹೇಗಿರಬೇಕು ಅಂತ ಯಾರಾದರೂ ಕೇಳಿದರೆ, ಬಹುಶಃ ನಾನು ಹೇಳುವ ಉತ್ತರ ಒಂದೇ, "ಅಚ್ಯುತ್ ಸರ್.", ಬರೀ ನಾನೊಬ್ಬನೇ ಅಲ್ಲ, ಎಲ್ಲಾ ವಿದ್ಯಾರ್ಥಿಗಳೂ, ಎಲ್ಲ ಉಪನ್ಯಾಸಕರೂ ಅಭಿಪ್ರಾಯವೂ ಇದೇ.. ಅಂದ್ರೆ ಅವರ ವ್ಯಕ್ತಿತ್ವದ ಔನ್ನತ್ಯ ಎಷ್ಟು ಅನ್ನೋದನ್ನು ಯಾರಾದ್ರೂ ಊಹಿಸಬಹುದು..!!!


ಆ ಮೊದಲನೇ ದಿನ, ಪ್ರಾಂಶುಪಾಲರು, ನಮ್ಮೆಲ್ಲರಿಗೂ ಸ್ವಾಗತ ಕೋರಿ, ಇಂಜಿನಿಯರಿಂಗ್ ನ ವೈಶಿಷ್ಟ್ಯ ಅದರ ಶಿಸ್ತು, ಬದ್ಧತೆ, ೪ ವರ್ಷಗಳ ಪರಿಶ್ರಮ ಇವೆಲ್ಲದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು..
ಅದಾದ ಬಳಿಕ, ಎಲ್ಲ ವಿದ್ಯಾರ್ಥಿಗಳನ್ನೂ ಸೇರಿಸಿ, ಇಡೀ ಕಾಲೇಜನ್ನು ಒಮ್ಮೆ ಸುತ್ತಿಸಿಕೊಂಡು ಬರಲು ಹಿರಿಯ ಉಪನ್ಯಾಸಕರು ಆರಂಭಿಸಿದರು..

ನನ್ನ ಮೊದಲ ಸ್ನೇಹಿತ ಸೃಷ್ಟಿಯಾಗಿದ್ದು ಇಲ್ಲೇ..ಹೆಸರು 'ಅನೂಪ'. ನನಗೆ ಅವನ ಪರಿಚಯವಿಲ್ಲದಿದ್ದರೂ, ಅವನಿಗೆ ನನ್ನ ಗುರುತಿತ್ತು. ಕಾರಣ, ಪ್ರೌಢಶಾಲೆಯಲ್ಲಿ ನನ್ನ ಗೆಳೆಯನಾಗಿದ್ದ ಒಬ್ಬ, ಅವನಿಗೆ ಪದವಿಪೂರ್ವ ತರಗತಿಯಲ್ಲಿ ಗೆಳೆಯನಾಗಿದ್ದರಿಂದ, ನನ್ನ ಮಾಹಿತಿಯೆಲ್ಲವೂ ಅವನಿಗೆ ತಿಳಿದಿತ್ತು.. ಹಾಗೆ ಕಾಲೇಜಿನ ಸುತ್ತ ಸುತ್ತುತ್ತಿರುವಾಗ ಅವನಾಗೇ ಬಂದು, "ಹೇ, ನೀನು ಭೀಮ ಆಲ್ವಾ?" ಅಂತ ಪ್ರಶ್ನಿಸಿದ. ಅರೆಕ್ಷಣ ಅವಾಕ್ಕಾದೆ..!! ಆನಂತರ ಅವನೇ ತನ್ನ ಪರಿಚಯವನ್ನು ಮಾಡಿಕೊಂಡ ಮೇಲೆ ತುಸು ಖುಷಿಯಾಯಿತು. [ ಬೇರೆ ಊರಲ್ಲೆಲ್ಲ ನಮ್ಮ ಕೀರ್ತಿಪತಾಕೆ ಹಾರಾಡ್ತಿದೆ ಅಂದ್ರೆ ಖುಷಿ ಆಗಲ್ವೇ.!!  ]..ಹಾಗೆ ಮಾತಾಡುತ್ತಾ, ಸುಮಾರು ೬೦ ಎಕರೆ ವಿಸ್ತೀರ್ಣದಲ್ಲಿ ಇರುವ ಕಾಲೇಜ್ ಕ್ಯಾಂಪಸ್, ವಿವಿಧ ವಿಭಾಗಗಳ ಕಟ್ಟಡಗಳನ್ನು ನೋಡುತ್ತಲೇ ಸಾಗಿದ್ದೆ...
ಆನಂತರ ನಿಗದಿತವಾದ ನಮ್ಮ ಕೊಠಡಿಗೆ ತೆರಳಿದೆವು..ಅದೂ ಹಳೆಯ ಟೆಕ್ಸ್ಟೈಲ್ ಬ್ಲಾಕ್ ನಲ್ಲಿ ಇದ್ದ ಕೊಠಡಿ.!!!

ನಮ್ಮದು "ಐ" ಸೆಕ್ಷನ್.. ಮೊದಲನೇ ವರ್ಷದ ಹತ್ತು ತರಗತಿಗಳಲ್ಲಿ ನಮ್ದು ಒಂಬತ್ತನೆದು. "ಐ" ಫಾರ್ ಇಂಟೆಲಿಜೆಂಟ್ಸ್ ಅಂತ ನಾವೇ ಅನ್ಕೊಂಡು ಬೀಗುತ್ತಿದ್ದೆವು.. ಮೊತ್ತಮೊದಲ ಕ್ಲಾಸ್ ಗೆ 'ಜಿ.ಎಸ್.ಬಿ' ಎಂಬ ಪ್ರಾಧ್ಯಾಪಕಿಯೊಬ್ಬರು ಎಲೆಕ್ಟ್ರಿಕಲ್ ವಿಷಯ ಬೋಧಿಸಲು ಬಂದಿದ್ದರು. ಮೊದಲ ಒಂದು ವಾರವಂತೂ ಬರೀ ಹೊಸ ಪರಿಚಯ, ಹೊಸ ಸ್ನೇಹ, ಇದರಲ್ಲೇ ಕಳೆದಿತ್ತು.. ಚೂರುಚೂರಾಗಿ ವಿಷಯಗಳ ಬೋಧನೆಯೂ ಆರಂಭವಾಗಿತ್ತು. ಅದೇ ಭೌತಶಾಸ್ತ್ರ, ಗಣಿತ ಇದ್ದಿದ್ದರಿಂದ ಅಷ್ಟೇನೂ ಕಷ್ಟ ಅನಿಸಿರಲಿಲ್ಲ.

ಆದರೆ ಯಾತನಾಮಯ ಅಂದ್ರೆ, ವರ್ಕ್-ಶಾಪ್. ಆ ಖಾಕಿ ವಸ್ತ್ರ ಧರಿಸಿ, ಮಧ್ಯಾಹ್ನದ ಬಿಸಿಲಿನಲ್ಲಿ, ಕಬ್ಬಿಣ ತಿಕ್ಕೋದು, ವೆಲ್ಡಿಂಗ್ ಇವೆಲ್ಲ ಬಹಳ ಬೇಸರದ ಆದರೆ ಅನಿವಾರ್ಯವಾದ ಸಂಗತಿಯಾಗಿದ್ದವು.. ನೋಡುನೋಡುತ್ತಿದ್ದಂತೆ ಮೊದಲನೇ ಇಂಟರ್ನಲ್ ಬಂತು. ಜನ್ಮದಲ್ಲಿ ಆ ಶಬ್ದ ಕೇಳಿದ್ದು ಅದೇ ಮೊದಲು. ಏನೋ ತಿಂಗಳ ಪರೀಕ್ಷೆ ಥರ ಇದೂ ಕೂಡ ಅಂತ ಹಿರಿಯ ಸ್ನೇಹಿತರು ಹೇಳಿದ್ದರು. ವಿಷಯಗಳು ಕಷ್ಟವಿಲ್ಲದಿದ್ದರೂ, ಹೊಸ ವಾತಾವರಣದ ಕಾರಣಕ್ಕೋ ಏನೋ, ಸ್ವಲ್ಪ ಭಯದಲ್ಲಿಯೇ ಇದ್ದೆ.. ಆದರೂ ಇಂಟರ್ನಲ್ ನ ಅಂಕಗಳು ಚೆನ್ನಾಗೆ ಬಂದಿತ್ತು..ಅಲ್ಲಿಗೆ ನನಗೂ ಸ್ವಲ್ಪ ಸಮಾಧಾನವಾಗಿತ್ತು.

ಅಷ್ಟರಲ್ಲಿ ಅನೇಕ ಹಾಸ್ಟೆಲ್ ವಿದ್ಯಾರ್ಥಿಗಳು ನನಗೆ ಗೆಳೆಯರಾಗಿದ್ದರು."ವರುಣ" ,"ಹರ್ಷ" ,"ಶ್ರೀನಿಧಿ" ,"ಸಂದೀಪ","ಹರೀಶ" ಹೀಗೇ ಪಟ್ಟಿ ಬೆಳೆಯುತ್ತಾ ಹೋಯಿತು..ಅದೊಂದು ದಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ "ದೇವೇಂದ್ರಪ್ಪ ಸರ್" ತರಗತಿಗೆ ಬಂದವರೇ, 'ಇವತ್ತು ಸಿ.ಆರ್ (ಕ್ಲಾಸ್ ರೆಪ್ರಸೆಂಟೇಟಿವ್) ನ ಆಯ್ಕೆಯಾಗಬೇಕಾಗಿದೆ, ಆಸಕ್ತಿಯಿದ್ದವರು ಹೆಸರು ಕೊಡಬಹುದು' ಅಂತಂದ್ರು.. ಒಟ್ಟು ೧೦ ಜನ ಎದ್ದು ನಿಂತಿದ್ದರು. ಶಾಲೆಯಲ್ಲೆಲ್ಲ ತರಗತಿಯ ಲೀಡರ್ ಆಗಿ ಅನುಭವವಿದ್ದ ನಾನೂ ಅವರ ಜೊತೆ ಎದ್ದು ನಿಂತೆ.. ಹಾಸ್ಟೆಲ್ ಹುಡುಗರ ಬೆಂಬಲ ಬೇರೆ ಇತ್ತಲ..!
ಅಷ್ಟು ಜನ ಎದ್ದು ನಿಂತಿದ್ದನ್ನು ನೋಡಿ, ಪ್ರಾಧ್ಯಾಪಕರಿಗೆ ಅಚ್ಚರಿಯಾಗಿ ಚುನಾವಣೆ ಆಗಬೇಕೆಂದರು. ಅದಕ್ಕೂ ಮುನ್ನ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ತಮ್ಮ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದರು.. ಒಂಥರಾ ರಾಜಕಾರಣಿಗಳು ಕ್ಯಾಂಪೇನ್ ಮಾಡ್ತಾರಲ ಹಂಗೆ.. ನಾನೂ ಮಾತನಾಡಲು ವೇದಿಕೆಗೆ ಹೋಗಿ "ನನ್ನ ಆಯ್ಕೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳನ್ನೂ ನಾನು ಪರಿಹರಿಸುತ್ತೇನೆ. ಎಲ್ಲ ವಿಷಯಗಳಲ್ಲೂ ಬೆಂಬಲಿಸುತ್ತೇನೆ" ಎಂದೆಲ್ಲಾ, ಅಪಾರ ಭರವಸೆಗಳನ್ನು ಕೊಟ್ಟೆ.. ನನ್ನ ನಂತರ ಬಂದವರೂ ಅದೇ ಥರದ ಮಾತುಗಳನ್ನಾಡಿದರು..ನಂತರ ಚುನಾವಣಾ ನಡೆಯಿತು. ಎಲ್ಲ ಅಭ್ಯರ್ಥಿಗಳಿಗೂ ಒಂದು ಸಂಖ್ಯೆ ಕೊಟ್ಟು, ಆಯಾ ಸಂಖ್ಯೆ ಗೆ ಮತ ಹಾಕಲು ಹೇಳಲಾಯಿತು.. ನನ್ನ ಸಂಖ್ಯೆ ೨ ಆಗಿತ್ತು.. ವಿಪರ್ಯಾಸ ಅಂದ್ರೆ, ನಾನೇ ನನಗೆ ಮತ ಹಾಕಿಕೊಂಡಿರಲಿಲ್ಲ.!!! ಬೇರೆಯವನಿಗೆ ಮತ ಹಾಕಿದ್ದೆ.. ಅದಕ್ಕೆ ಕಾರಣವೂ ಇತ್ತು.. ಹಾಗೆ ತರಗತಿಯ ನಾಯಕನಾದವನು, ಅನೇಕ ಕೆಲಸಗಳಲ್ಲಿ,ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿದಾಗ, ದಿನವೂ ಬೇರೆ ಊರಿನಿಂದ ಪ್ರಯಾಣ ಮಾಡೋದ್ರಲ್ಲೇ ಸುಸ್ತಾಗಿರುತ್ತೆ, ಇನ್ನ ಬೇರೆ ಕೆಲಸ ಮಾಡಲು ಸಾಧ್ಯವೇ ಎಂಬ ದಿಗಿಲು ನನ್ನನ್ನು ಕಾಡಿತ್ತು..!!

ಅಂತು ಚುನಾವಣಾ ಮುಗಿದು, ಮತ ಎಣಿಕೆ ಶುರುವಾಯಿತು..ಮೊದ್ಲು ಮೊದ್ಲು ಬರೀ ಬೇರೆಯವರ ಹೆಸರೇ ಬರುತ್ತಿತ್ತು. ನನ್ನ ಹೆಸರು ಬರಲೇ ಇಲ್ಲ. ಅಲ್ಲಿಗೆ ಠೇವಣಿ ಕಳೆದುಕೊಂಡ ಪರಿಸ್ಥಿತಿಯಲ್ಲಿ ನಾನಿದ್ದೆ.. ಆದರೆ ಆಮೇಲೆ, ಧಿಡೀರನೆ ಒಂದಿಷ್ಟು ಮತಗಳು ನನ್ನ ಪರವಾಗಿ ಸತತವಾಗಿ ಬಂದು, ಮತ್ತೆ ನಿಂತಿತು. ಬೇಸಿಗೆಯ ಅಕಾಲಿಕ ಮಳೆಯ ಹಾಗೆ..!
ಕೊನೆಗೆ, "ಅನೂಪ್ ಶರ್ಮ' ಎಂಬ ಹುಡುಗ ನಾಯಕನಾಗಿ ಆಯ್ಕೆಯಾಗಿದ್ದ.. ಅವನಾದರೋ ಮೂಲತಃ ಅದೇ ಊರಿನವನು, ತರಗತಿಯಲ್ಲಿದ್ದ ಅರ್ಧದಷ್ಟು ಜನ ಅವನ ಸ್ನೇಹಿತರೇ..!!  ಅವನಿಗೆ ಬಂದಿದ್ದ ಮತಗಳು ೧೪.. ನನಗೆ ಬಂದಿದ್ದು ಅವನ ಅರ್ಧದಷ್ಟು, ಅಂದ್ರೆ ೭ ಮತಗಳು..ಎಲ್ಲ ಅಪರಿಚಿತರ ನಡುವೆಯೂ, ನನಗೂ ಬೆಂಬಲ ನೀಡುವ ೭-೮ ಜನರಾದರೂ ಇದ್ದಾರಲ್ಲ ಎಂಬ ಹೆಮ್ಮೆಯಂತೂ ನನಗಾಗಿತ್ತು..!!!

ದಿನಗಳುರುಳಿದವು.. ಮೊದಲನೇ ಸೆಮಿಸ್ಟರ್ ನ ಪರೀಕ್ಷೆಗಳು ಬಂದೆ ಬಿಟ್ಟವು.. ಪ್ರಾಯೋಗಿಕ ಪರೀಕ್ಷೆಗಳೆನೋ ಮುಗಿದವು.. ಬರವಣಿಗೆಯ ವಿಷಯಗಳದ್ದೇ ಒಂದು ಭಯ ಇದ್ದೆ ಇತ್ತು. ಮೊದಲನೇ ವಿಷಯ ಭೌತಶಾಸ್ತ್ರ.. ಎಷ್ಟು ಓದಿದರೂ ಮರೆತು ಹೋಗುವಂತೆ ಭಾಸವಾಗುತ್ತಿತ್ತು.. ಆದರೂ ಹೇಗೋ ಎಲ್ಲವೂ ನಿರಾತಂಕವಾಗಿ ಮುಗಿಯಿತು.. ತಿಂಗಳ ನಂತರ ಫಲಿತಾಂಶವೂ ಬಂದಿತು, ಆಗ ನನ್ನ ಬಳಿ ಲ್ಯಾಪ್-ಟಾಪ್ ಇರಲಿಲ್ಲ. ನನ್ನ ಗೆಳೆಯನೊಬ್ಬ ಫೋನ್ ಮಾಡಿ ತಿಳಿಸಿದ.
ಅಚ್ಚರಿಯೆಂದರೆ, ನಾನೇ ತರಗತಿಯಲ್ಲಿ ಮೊದಲಿಗನಾಗಿ ಬಂದಿದ್ದೆ.. ಇಡೀ ಕಾಲೇಜಿಗೆ ಮೂರನೆಯನವನಾಗಿ..!! ಇದರ ನಂತರ, ಹೆಚ್ಚು ಅಂಕ ಪಡೆದ ಕಾರಣಕ್ಕೆ, ಒಂದಿಷ್ಟು ಜನಪ್ರಿಯತೆಯೂ ಹೆಚ್ಚಾಗಿತ್ತು..

ರಜೆ ಮುಗಿದು, ಎರಡನೇ ಸೆಮಿಸ್ಟರ್ ನ ತರಗತಿಗಳಿಗೆ ಹೊರಡಲು ಅಣಿಯಾದೆನು..!!




[ ಮುಂದುವರೆಯುವುದು.............]