Tuesday, November 19, 2013

ಕಾಲೇಜು ದಿನಗಳು...!! [ಭಾಗ-೪]

ಮೊದಲನೇ ದವನದಲ್ಲಿ ನನಗೆ ೨ ಪ್ರಶಸ್ತಿಗಳು ಬಂದಿದ್ದವು. ಪ್ರಶಸ್ತಿ ಪ್ರದಾನವು ಸಂಜೆ ನಡೆಯೋದಿತ್ತು. ಅದಕ್ಕಾಗಿ ಭವ್ಯ ವೇದಿಕೆ, ಬೃಹತ್ತಾದ ಸೌಂಡ್ ಸಿಸ್ಟಮ್ ಎಲ್ಲವೂ ತಯಾರಾಗಿತ್ತು.ಇಡೀ ಕಾಲೇಜು ವಿದ್ಯುದ್ದೀಪಗಳಿಂದ ಸಿಂಗರಿತವಾಗಿ, ಮದುವಣಗಿತ್ತಿಯಂತೆ ಹೊಳೆಯುತ್ತಿತ್ತು.! ಅದೇನೋ ಹಬ್ಬದ ವಾತಾವರಣ ಮನಸ್ಸಿನಲ್ಲೇ ಸೃಷ್ಟಿಯಾಗಿತ್ತು.. ಆ ಹೊತ್ತಿಗಾಗಲೇ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು ಎಲ್ಲರೂ ಬಂದು ಕುಳಿತಿದ್ದರು.

ಅವತ್ತಿನ ಮುಖ್ಯ ಆಕರ್ಷಣೆ ಅಂದ್ರೆ, ಅಂದು ಬರಲಿದ್ದ ಮುಖ್ಯ ಅತಿಥಿ. ಮುಂಗಾರು ಮಳೆಯ ಯಶಸ್ಸಿಗೆ ಮುಖ್ಯ ಕಾರಣಕರ್ತರುಗಳಲ್ಲಿ ಒಬ್ಬರಾದ, ಮನೋಜ್ಞ ಕವಿತೆಗಳನ್ನು ಕನ್ನಡಿಗರಿಗಾಗಿ ಬರೆದು ನೂತನ ಯುಗವನ್ನು ಸೃಷ್ಟಿಸಿದ ಶ್ರೀ ಜಯಂತ ಕಾಯ್ಕಿಣಿ..!! ನಾನೂ ಬಹಳಷ್ಟು ಉತ್ಸುಕನಾಗಿದ್ದೆ.. ದವನದ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿ ಸ್ವೀಕರಿಸುವೆನೆಂಬ ಹೆಮ್ಮೆಯೂ ಒಂದು ಕಡೆ.!

ಅವತ್ತು ಸಂಜೆ ಬಹುಶಃ ೬, ೬-೩೦ ಕ್ಕೆ ಕಾರ್ಯಕ್ರಮ ಆರಂಭವಾಯಿತು.. ಪ್ರಾರ್ಥನೆಯ ನಂತರ, ನಮ್ಮ ಕೃಷ್ಣನೇ ಸ್ವಾಗತ ಭಾಷಣ ಮಾಡಿದ. ಅಚ್ಚ ಕನ್ನಡದ ಅವನ ಸ್ವಾಗತ ಮನಸೂರೆಗೊಂಡಿತು.. ತದನಂತರ ಜಯಂತ ಕಾಯ್ಕಿಣಿಯವರ "ಅನಿಸುತಿದೆ ಯಾಕೋ ಇಂದು" ಹಾಡನ್ನು ವೇದಿಕೆಯ ಮೇಲೆ ನನ್ನ ಸ್ನೇಹಿತ ವಿಶ್ವೇಶ್ವರ ಮಧುರವಾಗಿ ಹಾಡಿದ. ಅವನಿಗೆ ಗೌತಮ್ ಮತ್ತು ಭರತೇಶ್ ಇಬ್ಬರೂ ಕೀಬೋರ್ಡ್ ನ ಸಹಾಯ ನೀಡಿದರು.. ಆಮೇಲೆ ಕಾಯ್ಕಿಣಿಯವರು ತಮ್ಮ ಅತಿಥಿ ಭಾಷಣವನ್ನು ಮಾಡಿದರು. ನಾಡಿನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಯುವಕರು ಮುನ್ನುಗ್ಗಬೇಕು ಎಂಬುದನ್ನು ರಸವತ್ತಾಗಿ ಹೇಳಿದರು.. 

ಎಲ್ಲರ ಭಾಷಣ ಮುಗಿದ ಮೇಲೆ, ಬಹುಮಾನ ವಿತರಣೆ ಆಗುವುದಿತ್ತು. ಎಲ್ಲರ ತರಹವೇ ನಾನೂ ಉತ್ಸಾಹದಿಂದ ವೇದಿಕೆಯ ಹತ್ತಿರ ನಿಂತಿದ್ದೆ. ಉಪನ್ಯಾಸಕರೊಬ್ಬರು ಒಂದೊಂದಾಗಿ ಎಲ್ಲ ಸ್ಪರ್ಧೆಗಳ ವಿಜೇತರುಗಳ ಪಟ್ಟಿಯನ್ನು ಓದುತ್ತ ಹೋದರು.. ನಾನೂ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದೆ. ಅದೊಂಥರಾ ಖುಷಿಯ ಸಂದರ್ಭ. ಸಾವಿರಾರು ಸ್ನೇಹಿತರ ಎದುರು ವೇದಿಕೆಯ ಮೇಲೆ ಬಹುಮಾನ ಹಿಡಿದುಕೊಳ್ಳುವುದು..!! ಆ ವರ್ಷ ನಗದು ಬಹುಮಾನವನ್ನು ಕೊಟ್ಟಿದ್ರು. ಮೊದಲನೇ ಸ್ಥಾನಕ್ಕೆ ೨೫೦, ಎರಡನೆಯದಕ್ಕೆ ೨೦೦, ಮತ್ತು ಮೂರನೆಯ ಬಹುಮಾನಕ್ಕೆ ೧೫೦ ರೂಗಳು. ನನಗೆ ಎರಡು ದ್ವಿತೀಯ ಬಹುಮಾನ ಬಂದಿದ್ರಿಂದ, ಒಟ್ಟು ೪೦೦ ರೂಗಳು ಸಿಕ್ಕಿದವು..!!

ಉಳಿದೆಲ್ಲ ಸ್ಪರ್ಧಾಕೂಟಗಳಲ್ಲಿ ಇರುವಂತೆ, ನಮ್ಮ ದವನದಲ್ಲೂ, ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗೆ ವಿಶೇಷವಾಗಿ "ದವನಶ್ರೀ" ಎಂಬ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗುತ್ತಿತ್ತು.. ದವನಕ್ಕೆ ಬರುವ ಬಹುತೇಕ ಎಲ್ಲರಿಗೂ, ಇಂಜಿನಿಯರಿಂಗ್ ನ ೪ ವರ್ಷಗಳಲ್ಲಿ ಒಮ್ಮೆಯಾದರೂ ಆ ದವನಶ್ರೀಯನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆ ಇರ್ತಿತ್ತು.. ಅದಕ್ಕಾಗಿ ಬಹಳಷ್ಟು ಕಸರತ್ತನ್ನೂ ನಡೆಸುತ್ತಿದ್ದರು.. ಈ ಮೊದಲನೇ ದವನದಲ್ಲಿ ಶಿವಮೊಗ್ಗದ JNNC ಕಾಲೇಜಿನ 'ಶೂನ್ಯಶ್ರೀ' ಎಂಬ ವಿದ್ಯಾರ್ಥಿನಿಗೆ ಆ ಪ್ರಶಸ್ತಿ ಲಭಿಸಿತ್ತು. ಆಕೆ ಅದ್ಭುತ ಚಿತ್ರಕಲಾ ಪ್ರವೀಣೆ. ಪೇಂಟಿಂಗ್,ರಂಗೋಲಿ,ಕೊಲಾಜ್, ಕಾರ್ಟೂನಿಂಗ್ ಇಲ್ಲೆಲ್ಲಾ ಉತ್ತಮ ಕಲಾಕೃತಿಗಳನ್ನು ರಚಿಸಿದ್ದರಿಂದ ಅವಳಿಗೆ ಆ ಯಶಸ್ಸು ದಕ್ಕಿತ್ತು..
ಇದರ ಜೊತೆಗೆ, ಅತೀ ಹೆಚ್ಚು ಬಹುಮಾನಗಳನ್ನು ಪಡೆದ ಕಾಲೇಜಿಗೂ "ಚಾಂಪಿಯನ್ ಪ್ರಶಸ್ತಿ"ಯನ್ನು ಕೊಡಲಾಗುತ್ತಿತ್ತು. ಅವತ್ತು ಬಳ್ಳಾರಿಯ RYMSC ಕಾಲೇಜು ಅತಿಹೆಚ್ಚು ಬಹುಮಾನಗಳನ್ನು ಗೆದ್ದು ಚಾಂಪಿಯನ್ ಆಗಿ ಆಯ್ಕೆಯಾಗಿತ್ತು.. ಆ ಕಾಲೇಜಿನ ಉಪನ್ಯಾಸಕರು, ಕೆಲವು ವಿದ್ಯಾರ್ಥಿಗಳು ವೇದಿಕೆಯ ಮೇಲೇರಿ ಪ್ರಶಸ್ತಿ ಸ್ವೀಕರಿಸುತ್ತಿದ್ದರೆ, ವೇದಿಕೆಯ ಕೆಳಗೆ ನಿಂತ ಆ ಕಾಲೇಜಿನ ಉಳಿದ ಹುಡುಗರು "RYMSC..RYMSC.." ಎಂದು ಸಂಭ್ರಮದಿಂದ ಕೇಕೆ ಹಾಕುತ್ತಿದ್ದರು..

ಹೀಗೆ ಔಪಚಾರಿಕ ಸಮಾರಂಭ ಮುಗಿದ ಮೇಲೆ, ನಿಜವಾದ ದವನದ ರಂಗು ಮೇಲೇರುವುದಿತ್ತು. ಹಾಡು, ನೃತ್ಯ, ನಾಟಕ ಹೀಗೆ ಹಲವಾರು ಕಾರ್ಯಕ್ರಮಗಳು ವೇದಿಕೆಯ ಮೇಲೆ ನಡೆಯೋದಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನನ್ನ ತಲೆನೋವು ಮಿತಿಮೀರಿತ್ತು. ನಿಲ್ಲುವುದಕ್ಕೂ ಆಗದ ಪರಿಸ್ಥಿತಿ. ಹೀಗಾಗಿ ಮನೆಗೆ ಹೊರಡಲು ನಿರ್ಧರಿಸಿದೆ. ಕೃಷ್ಣನಿಗೆ ತಿಳಿಸಿ, ನಾನು ಬಸ್ ಹತ್ತಿ ಮನೆಗೆ ವಾಪಸ್ಸಾದೆ.ಮನೆಗೆ ಬಂದವನೇ, ಬಂದಿದ್ದ ಬಹುಮಾನಗಳನ್ನು ಅಪ್ಪ-ಅಮ್ಮನಿಗೆ ತೋರಿಸಿದೆ. ಅವರೂ ಮನಸಾ ಖುಷಿ ಪಟ್ಟರು.. ತಲೆನೋವು ಎಷ್ಟೇ ಇದ್ದರೂ, ಮನಸ್ಸು ಮಾತ್ರ ಕುಣಿದಾಡುತ್ತಿತ್ತು..!!

ದವನ ಮುಗಿದ ಮೇಲೂ, ಎಷ್ಟೋ ದಿನ ಅದರ ಗುಂಗಿನಲ್ಲೇ ಇದ್ದೆ. ಪರಿಚಯವಾದ ಹೊಸ ಗೆಳೆಯರು, ಹೊಸ ಪ್ರತಿಭೆಗಳು ಇವುಗಳ ನೆನಪೇ ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಈ ಗುಂಗಿನಿಂದ ಹೊರ ಬರುವಷ್ಟರಲ್ಲಿ, ಎರಡನೇ ಸೆಮಿಸ್ಟರ್ ನ ಪರೀಕ್ಷೆಗಳು ಆರಂಭವಾಗಿಯೇ ಬಿಟ್ಟವು.. ಕೆಮಿಸ್ಟ್ರಿ,ಗಣಿತ ಹೊರತುಪಡಿಸಿದರೆ ಉಳಿದವೆಲ್ಲವೂ ನನಗೆ ಹೊಸ ವಿಷಯಗಳೇ. ಆದರೂ ಹೇಗೋ ಹಗಲು ರಾತ್ರಿ ಓದಿ ಪರೀಕ್ಷೆ ಬರೆದೆ..ಅಂತೂ ಎಲ್ಲ ನಿರಾಳವಾಗಿ ಮುಗಿಯಿತು. ಮುಂದಿನ ಸೆಮಿಸ್ಟರ್ ನಲ್ಲಿ ನಮ್ಮ ನಮ್ಮ ವಿಭಾಗಗಳಿಗೆ ಹೋಗಬೇಕಾಗಿತ್ತು. ಕಂಪ್ಯೂಟರ್ ಸೈನ್ಸ್ ಅನ್ನು, ಇನ್ನೂ ೩ ವರ್ಷ ಹೇಗೆ ಓದಿ ಪಾರುಮಾಡುವುದೆಂಬ ಒಂದು ಸಣ್ಣ ಅಳುಕು ಯಾವಾಗಲೂ ನನ್ನ ಮನದ ಮೂಲೆಯಲ್ಲಿ ಇದ್ದೆ ಇತ್ತು. ಆದರೂ, ರಜೆ ಪ್ರಾರಂಭವಾಗಿದ್ದರಿಂದ, ಎಲ್ಲ ಮರೆತು ಹಾಯಾಗಿರಲು ನಿರ್ಧರಿಸಿದೆ. ಗೆಳೆಯರನ್ನೆಲ್ಲ ಬೀಳ್ಕೊಟ್ಟು ರಜೆಯ ಮಜಾಕ್ಕೆ ಹೊರಡಲು ಅಣಿಯಾದೆ..!!


[ ಮುಂದುವರೆಯುವುದು... !! ]

2 comments:

  1. ಇಂತಹ ಪ್ರತಿಭೆಯನ್ನು ನಾನು ಯಾವಾಗ ಭೇಟಿಯಾಗೋದು?

    ReplyDelete
    Replies
    1. ಒಂದ್ ಮುಹೂರ್ತ ಫಿಕ್ಸ್ ಮಾಡಿ ಬರುವ..:)
      ಬೆಂಗಳೂರಿನಲ್ಲೇ ಇದೀನಿ.. ಇಷ್ಟರಲ್ಲೇ ಸಿಗೋಣ..!

      Delete