Monday, August 5, 2013

ಕಾಲೇಜು ದಿನಗಳು...! [ಭಾಗ ೧]

[ ಕೇವಲ ನಾಲ್ಕು ಸೆಕೆಂಡುಗಳಂತೆ ಸಂದು ಹೋದ ಇಂಜಿನಿಯರಿಂಗ್ ನ ಈ ನಾಲ್ಕು ವರ್ಷಗಳು, ಅನನ್ಯ ಅನುಭವದ ಗೂಡು. ಹೀಗೊಮ್ಮೆ ಅತೀತಕಾಲದೆಡೆ ತಿರುಗಿನೋಡಿ, ಸಾಗಿಬಂದ ರಸ್ತೆಯಲ್ಲಿ ಅವಿತಿಟ್ಟುಕೊಂಡಿರುವ ನೆನಪುಗಳನ್ನೆಲ್ಲ ಕೆದಕಿ ಹೊರತೆಗೆದು ನೀರು ಚಿಮುಕಿಸಿದಾಗಲೆಲ್ಲಾ, ಮತ್ತೆ ಮತ್ತೆ ಅನಿರ್ವಚನೀಯ ಆನಂದವೊಂದು ಮೊಳಕೆಯೊಡೆಯುತ್ತದೆ. ಆ ಮೊಳಕೆಯೊಡೆದ ಆನಂದದ ನೆರಳಿನಲ್ಲಿ ಕೂತು, ಈ ನಾಲ್ಕುವರ್ಷಗಳನ್ನು ನೋಡಿದರೆ, ಪ್ರತಿದಿನ, ಪ್ರತಿಕ್ಷಣವೂ ವಿಶಿಷ್ಟವಾಗಿ ಗೋಚರಿಸುತ್ತವೆ.
ಆ ಅವಿಸ್ಮರಣೀಯ ಘಟನಾವಳಿಗಳ ತುಣುಕುನೋಟವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನವಿದು..
ಈ ನಾಲ್ಕುವರ್ಷಗಳ ಅವಧಿಯಲ್ಲಿ ಜೊತೆಗಿದ್ದು ಹೆಗಲುಕೊಟ್ಟ ಎಲ್ಲರಿಗೂ ಈ ಸರಣಿಲೇಖನ ಅರ್ಪಣೆ..
ಈ ಲೇಖನಮಾಲೆಯ ಓದುವಿಕೆಯಿಂದ, ನನ್ನ ಗೆಳೆಯರ ವಿದ್ಯಾಥಿಜೀವನದ ನೆನಪುಗಳು ಮನದಾಳದಲ್ಲಿ ಮರುಕಳಿಸಿದರೆ, ಅದೇ ನನ್ನ ಬರಹದ ಸಾರ್ಥಕತೆ.!! ]

-------------------------------------------------------------------------------------------------------------

ಅವತ್ತು ಸೆಪ್ಟೆಂಬರ್ 4-2008. ಬಾಪೂಜಿ ಕಾಲೇಜಿನಲ್ಲಿ ನನ್ನ ಇಂಜಿನಿಯರಿಂಗ್ ವ್ಯಾಸಂಗ ಪ್ರಾರಂಭವಾದ ದಿನವದು. ಬೆಳಗಿನ ನಸುಕಿನಲ್ಲಿ, ಭವಿಷ್ಯದ  ಹೊಸ ಕನಸುಗಳ ಬ್ಯಾಗನ್ನು ಹೊತ್ತು ಬಸ್ಸಿಗಾಗಿ ದಾರಿ ಕಾಯುತ್ತಿದ್ದ ಕ್ಷಣ ಇನ್ನೂ ಸ್ಮೃತಿಪಟಲದಲ್ಲಿದೆ.. [ ಆಗಿನ್ನೂ ನಾನು 'ಹ್ಯಾಪಿಡೇಸ್' ಸಿನೆಮಾ ನೋಡಿರಲಿಲ್ಲ. ಅಕಸ್ಮಾತ್ ನೋಡಿದ್ದಿದ್ರೆ ಇನ್ನೂ ಬಗೆಬಗೆಯ  ಕನಸುಗಳೂ ಇರ್ತಿದ್ವೇನೋ..!!].. ಅಂತೂ ನನ್ನ ವಿದ್ಯಾರ್ಥಿಜೀವನದ ಮತ್ತೊಂದು ಮಜಲಿನ ದರವಾಜು ನನ್ನ ಬರುವಿಕೆಗಾಗಿ ಕಾದು ನಿಂತಿತ್ತು..

ಆ ಬಸ್ಸನ್ನು ನಾನು ಮರೆಯುವಂತೆಯೇ ಇಲ್ಲ.. ನಾನೊಬ್ಬನೇ ಅಲ್ಲ, ಹರಿಹರದಿಂದ ಓಡಾಡುವ ಯಾವ  ಇಂಜಿನಿಯರಿಂಗ್ ವಿದ್ಯಾರ್ಥಿಯೂ ಆ ಬಸ್ಸನ್ನ ಮರೆಯಲು ಸಾಧ್ಯವಿಲ್ಲ.  'ಚಿಕ್ಕಬಿದರಿ' ಗ್ರಾಮದಿಂದ ದಾವಣಗೆರೆಗೆ ಹೋಗುವ ನೀಲಿ-ಬಿಳಿ ಬಣ್ಣ ಮಿಶ್ರಿತ, ಗ್ರಾಮಾಂತರ ಸಾರಿಗೆಯ ಬಸ್ಸದು. ಇಂಜಿನಿಯರಿಂಗ್ ಹುಡುಗರ ಮತ್ತು ಸಾರಿಗೆ ಸಂಸ್ಥೆಯವರ ಒಪ್ಪಂದದ ಮೇರೆಗೆ, ಅದೊಂದು ಬಸ್ಸು ಬೆಳಗಿನ ಮೊದಲ ಟ್ರಿಪ್ ಅನ್ನು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿತ್ತು.. ಪ್ರತಿದಿನ ಸುಮಾರು 7-15 ರ ಹೊತ್ತಿಗೆ ಹರಿಹರದ ಎಲ್ಲ ಅಭಿಯಂತರರನ್ನು ತುಂಬಿಸಿಕೊಂಡು, ನೇರ ನಮ್ಮ ಬಾಪೂಜಿ ಕಾಲೇಜಿನ ಗೇಟಿನ ಬಳಿಗೆ ನಿಲ್ಲುತ್ತಿತ್ತು.. ಹೀಗಾಗಿಯೇ, ಆ ಬಸ್ಸನ್ನೇ ಹಿಡಿಯಲು ಶತಾಯ-ಗತಾಯ ಪ್ರಯತ್ನಿಸುತ್ತಿದ್ದೆವು.. ಜೊತೆಗೆ ಆ ಬಸ್ಸು ಹೋಗುವಾಗ, ನಮ್ಮ ಮನೆಯ ಹತ್ತಿರದ ಮುಖ್ಯರಸ್ತೆಯಲ್ಲಿಯೇ ಹೋಗಬೇಕಾದ್ದರಿಂದ, ನನಗೆ ಬಸ್ಸು ಹಿಡಿಯುವುದು ಅಷ್ಟೊಂದು ಕಷ್ಟವಾಗಿರಲಿಲ್ಲ.. ಆದರೂ ಈ ಬಸ್ಸು ಹಿಡಿಯುವ ಉತ್ಸಾಹ ಮೊದಲೆರಡು ವರ್ಷದಲ್ಲಿದ್ದಂತೆ ಕೊನೆವರೆಗೂ ಇರಲಿಲ್ಲ. 5 ನೆ ಸೆಮಿಸ್ಟರ್ ನಿಂದಂತೂ ಒಮ್ಮೆಯೂ ಆ ಬಸ್ಸನ್ನು ಹತ್ತಲೇ ಇಲ್ಲ.. ಮನಸ್ಸಿಗೆ ಬಂದ ಸಮಯಕ್ಕೆ, ಸಿಕ್ಕ ಬೇರೆ ಬಸ್ಸನ್ನು ಹಿಡಿದು ಹೋಗುವುದೇ ರೂಢಿಯಾಗಿತ್ತು.. ಇದು ನನ್ನೊಬ್ಬನ ಪಾಡಲ್ಲ... ಹರಿಹರದ ಎಲ್ಲ ವಿದ್ಯಾರ್ಥಿಗಳೂ ಎರಡು ವರ್ಷಗಳ ನಿರಂತರ ಓಡಾಟದಿಂದ ಬೇಸತ್ತು ಬದಲಾಗುವ ಪರಿಯಿದು..!!!


ಮೊದಲನೇ ದಿನ, ಕಾಲೇಜಿನಲ್ಲಿ ಕಾಲಿಟ್ಟಾಗ ನನ್ನ ತರಹವೇ, ಯಾವುದೋ ಲೋಕಕ್ಕೆ ಬಂದಂತೆ ದಿಗ್ಭ್ರಾಂತರಾಗಿ ನಿಂತಿದ್ದ ಹುಡುಗ-ಹುಡುಗಿಯರ ದಂಡೇ ನೆರೆದಿತ್ತು.. ಅಲ್ಲೊಂದಿಷ್ಟು ಪರಿಚಯ, ನಗುವಿನ ವಿನಿಮಯ ಹಾಗೇ ನಡೆದಿತ್ತು..
ಅಲ್ಲಿನ ಸಿಬ್ಬಂದಿಯೊಬ್ಬನ ಸೂಚನೆಯ ಮೇರೆಗೆ, ಎರಡನೇ ಅಂತಸ್ತಿನಲ್ಲಿದ್ದ, "ಸೆಮಿನಾರ್ ಹಾಲ್" ಗೆ ಹೋಗಿ ಕುಳಿತೆವು..ಹಾಗೆ ನೋಡೋದಾದ್ರೆ, ಹರಿಹರದಿಂದ ಬಂದಿದ್ದ ಒಂದಿಷ್ಟು ಗೆಳೆಯರನ್ನು ಬಿಟ್ರೆ, ಉಳಿದವರೆಲ್ಲ ಅಪರಿಚಿತರೇ. ಯಾರೊಬ್ಬರ ಮುಖಪರಿಚಯ ಕೂಡ ಇರಲಿಲ್ಲ..!! ಹಾಗೇ ಒಮ್ಮೆ ಎಲ್ಲ ಕಡೆ ಕಣ್ಣು ಹಾಯಿಸುತ್ತಿರುವಾಗಲೇ, ಒಮ್ಮೆಲೇ ಎಲ್ಲರೂ ಎದ್ದು ನಿಂತರು.. ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ನಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡಲು, ಕಾಲೇಜಿನ ಪ್ರಾಂಶುಪಾಲರು ಬರುತ್ತಿರುವುದು ಗೋಚರಿಸಿತು..

"ಡಾ.ಬಿ.ಟಿ.ಅಚ್ಯುತ" -- ಬಹುಶಃ ಇಂಥಾ ಒಬ್ಬ ಅದ್ಭುತ ಪ್ರಾಂಶುಪಾಲರನ್ನು ನಾನು ಹಿಂದೆಯೂ ನೋಡಿಲ್ಲ, ಮುಂದೆಯೂ ನೋಡಲು ಸಾಧ್ಯವಿಲ್ಲ.. ಸುಮಾರು ೬೫ ರ ಮೇಲಿನ ವಯಸ್ಸಾಗಿದ್ದರೂ, ಅದೇ ತಾರುಣ್ಯ,ಲವಲವಿಕೆ, ಸದಾ ಮುಖದಲ್ಲೊಂದು ಮೃದುನಗೆ, ಯಾವುದೇ ವರ್ಷದ,ಯಾವುದೇ ವಿಭಾಗದ ವಿದ್ಯಾರ್ಥಿಯಾಗಿರಲಿ ಎಲ್ಲರೊಂದಿಗೂ ಅಷ್ಟೇ ಆತ್ಮೀಯತೆಯ ಒಡನಾಟ, ಯಾರೊಬ್ಬರಿಗೂ ಕಟುವಾಗಿ ನಿಂದಿಸದ ಸೌಮ್ಯತೆ, ವಿದ್ಯಾರ್ಥಿಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಪ್ರಾಂಶುಪಾಲರು ಬಹುಬೇಗ ಎಲ್ಲರನ್ನೂ ಆಕರ್ಷಿಸುತ್ತಿದ್ದರು.. ಪ್ರಿನ್ಸಿಪಾಲ್ ಅಂದ್ರೆ ಹೇಗಿರಬೇಕು ಅಂತ ಯಾರಾದರೂ ಕೇಳಿದರೆ, ಬಹುಶಃ ನಾನು ಹೇಳುವ ಉತ್ತರ ಒಂದೇ, "ಅಚ್ಯುತ್ ಸರ್.", ಬರೀ ನಾನೊಬ್ಬನೇ ಅಲ್ಲ, ಎಲ್ಲಾ ವಿದ್ಯಾರ್ಥಿಗಳೂ, ಎಲ್ಲ ಉಪನ್ಯಾಸಕರೂ ಅಭಿಪ್ರಾಯವೂ ಇದೇ.. ಅಂದ್ರೆ ಅವರ ವ್ಯಕ್ತಿತ್ವದ ಔನ್ನತ್ಯ ಎಷ್ಟು ಅನ್ನೋದನ್ನು ಯಾರಾದ್ರೂ ಊಹಿಸಬಹುದು..!!!


ಆ ಮೊದಲನೇ ದಿನ, ಪ್ರಾಂಶುಪಾಲರು, ನಮ್ಮೆಲ್ಲರಿಗೂ ಸ್ವಾಗತ ಕೋರಿ, ಇಂಜಿನಿಯರಿಂಗ್ ನ ವೈಶಿಷ್ಟ್ಯ ಅದರ ಶಿಸ್ತು, ಬದ್ಧತೆ, ೪ ವರ್ಷಗಳ ಪರಿಶ್ರಮ ಇವೆಲ್ಲದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು..
ಅದಾದ ಬಳಿಕ, ಎಲ್ಲ ವಿದ್ಯಾರ್ಥಿಗಳನ್ನೂ ಸೇರಿಸಿ, ಇಡೀ ಕಾಲೇಜನ್ನು ಒಮ್ಮೆ ಸುತ್ತಿಸಿಕೊಂಡು ಬರಲು ಹಿರಿಯ ಉಪನ್ಯಾಸಕರು ಆರಂಭಿಸಿದರು..

ನನ್ನ ಮೊದಲ ಸ್ನೇಹಿತ ಸೃಷ್ಟಿಯಾಗಿದ್ದು ಇಲ್ಲೇ..ಹೆಸರು 'ಅನೂಪ'. ನನಗೆ ಅವನ ಪರಿಚಯವಿಲ್ಲದಿದ್ದರೂ, ಅವನಿಗೆ ನನ್ನ ಗುರುತಿತ್ತು. ಕಾರಣ, ಪ್ರೌಢಶಾಲೆಯಲ್ಲಿ ನನ್ನ ಗೆಳೆಯನಾಗಿದ್ದ ಒಬ್ಬ, ಅವನಿಗೆ ಪದವಿಪೂರ್ವ ತರಗತಿಯಲ್ಲಿ ಗೆಳೆಯನಾಗಿದ್ದರಿಂದ, ನನ್ನ ಮಾಹಿತಿಯೆಲ್ಲವೂ ಅವನಿಗೆ ತಿಳಿದಿತ್ತು.. ಹಾಗೆ ಕಾಲೇಜಿನ ಸುತ್ತ ಸುತ್ತುತ್ತಿರುವಾಗ ಅವನಾಗೇ ಬಂದು, "ಹೇ, ನೀನು ಭೀಮ ಆಲ್ವಾ?" ಅಂತ ಪ್ರಶ್ನಿಸಿದ. ಅರೆಕ್ಷಣ ಅವಾಕ್ಕಾದೆ..!! ಆನಂತರ ಅವನೇ ತನ್ನ ಪರಿಚಯವನ್ನು ಮಾಡಿಕೊಂಡ ಮೇಲೆ ತುಸು ಖುಷಿಯಾಯಿತು. [ ಬೇರೆ ಊರಲ್ಲೆಲ್ಲ ನಮ್ಮ ಕೀರ್ತಿಪತಾಕೆ ಹಾರಾಡ್ತಿದೆ ಅಂದ್ರೆ ಖುಷಿ ಆಗಲ್ವೇ.!!  ]..ಹಾಗೆ ಮಾತಾಡುತ್ತಾ, ಸುಮಾರು ೬೦ ಎಕರೆ ವಿಸ್ತೀರ್ಣದಲ್ಲಿ ಇರುವ ಕಾಲೇಜ್ ಕ್ಯಾಂಪಸ್, ವಿವಿಧ ವಿಭಾಗಗಳ ಕಟ್ಟಡಗಳನ್ನು ನೋಡುತ್ತಲೇ ಸಾಗಿದ್ದೆ...
ಆನಂತರ ನಿಗದಿತವಾದ ನಮ್ಮ ಕೊಠಡಿಗೆ ತೆರಳಿದೆವು..ಅದೂ ಹಳೆಯ ಟೆಕ್ಸ್ಟೈಲ್ ಬ್ಲಾಕ್ ನಲ್ಲಿ ಇದ್ದ ಕೊಠಡಿ.!!!

ನಮ್ಮದು "ಐ" ಸೆಕ್ಷನ್.. ಮೊದಲನೇ ವರ್ಷದ ಹತ್ತು ತರಗತಿಗಳಲ್ಲಿ ನಮ್ದು ಒಂಬತ್ತನೆದು. "ಐ" ಫಾರ್ ಇಂಟೆಲಿಜೆಂಟ್ಸ್ ಅಂತ ನಾವೇ ಅನ್ಕೊಂಡು ಬೀಗುತ್ತಿದ್ದೆವು.. ಮೊತ್ತಮೊದಲ ಕ್ಲಾಸ್ ಗೆ 'ಜಿ.ಎಸ್.ಬಿ' ಎಂಬ ಪ್ರಾಧ್ಯಾಪಕಿಯೊಬ್ಬರು ಎಲೆಕ್ಟ್ರಿಕಲ್ ವಿಷಯ ಬೋಧಿಸಲು ಬಂದಿದ್ದರು. ಮೊದಲ ಒಂದು ವಾರವಂತೂ ಬರೀ ಹೊಸ ಪರಿಚಯ, ಹೊಸ ಸ್ನೇಹ, ಇದರಲ್ಲೇ ಕಳೆದಿತ್ತು.. ಚೂರುಚೂರಾಗಿ ವಿಷಯಗಳ ಬೋಧನೆಯೂ ಆರಂಭವಾಗಿತ್ತು. ಅದೇ ಭೌತಶಾಸ್ತ್ರ, ಗಣಿತ ಇದ್ದಿದ್ದರಿಂದ ಅಷ್ಟೇನೂ ಕಷ್ಟ ಅನಿಸಿರಲಿಲ್ಲ.

ಆದರೆ ಯಾತನಾಮಯ ಅಂದ್ರೆ, ವರ್ಕ್-ಶಾಪ್. ಆ ಖಾಕಿ ವಸ್ತ್ರ ಧರಿಸಿ, ಮಧ್ಯಾಹ್ನದ ಬಿಸಿಲಿನಲ್ಲಿ, ಕಬ್ಬಿಣ ತಿಕ್ಕೋದು, ವೆಲ್ಡಿಂಗ್ ಇವೆಲ್ಲ ಬಹಳ ಬೇಸರದ ಆದರೆ ಅನಿವಾರ್ಯವಾದ ಸಂಗತಿಯಾಗಿದ್ದವು.. ನೋಡುನೋಡುತ್ತಿದ್ದಂತೆ ಮೊದಲನೇ ಇಂಟರ್ನಲ್ ಬಂತು. ಜನ್ಮದಲ್ಲಿ ಆ ಶಬ್ದ ಕೇಳಿದ್ದು ಅದೇ ಮೊದಲು. ಏನೋ ತಿಂಗಳ ಪರೀಕ್ಷೆ ಥರ ಇದೂ ಕೂಡ ಅಂತ ಹಿರಿಯ ಸ್ನೇಹಿತರು ಹೇಳಿದ್ದರು. ವಿಷಯಗಳು ಕಷ್ಟವಿಲ್ಲದಿದ್ದರೂ, ಹೊಸ ವಾತಾವರಣದ ಕಾರಣಕ್ಕೋ ಏನೋ, ಸ್ವಲ್ಪ ಭಯದಲ್ಲಿಯೇ ಇದ್ದೆ.. ಆದರೂ ಇಂಟರ್ನಲ್ ನ ಅಂಕಗಳು ಚೆನ್ನಾಗೆ ಬಂದಿತ್ತು..ಅಲ್ಲಿಗೆ ನನಗೂ ಸ್ವಲ್ಪ ಸಮಾಧಾನವಾಗಿತ್ತು.

ಅಷ್ಟರಲ್ಲಿ ಅನೇಕ ಹಾಸ್ಟೆಲ್ ವಿದ್ಯಾರ್ಥಿಗಳು ನನಗೆ ಗೆಳೆಯರಾಗಿದ್ದರು."ವರುಣ" ,"ಹರ್ಷ" ,"ಶ್ರೀನಿಧಿ" ,"ಸಂದೀಪ","ಹರೀಶ" ಹೀಗೇ ಪಟ್ಟಿ ಬೆಳೆಯುತ್ತಾ ಹೋಯಿತು..ಅದೊಂದು ದಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ "ದೇವೇಂದ್ರಪ್ಪ ಸರ್" ತರಗತಿಗೆ ಬಂದವರೇ, 'ಇವತ್ತು ಸಿ.ಆರ್ (ಕ್ಲಾಸ್ ರೆಪ್ರಸೆಂಟೇಟಿವ್) ನ ಆಯ್ಕೆಯಾಗಬೇಕಾಗಿದೆ, ಆಸಕ್ತಿಯಿದ್ದವರು ಹೆಸರು ಕೊಡಬಹುದು' ಅಂತಂದ್ರು.. ಒಟ್ಟು ೧೦ ಜನ ಎದ್ದು ನಿಂತಿದ್ದರು. ಶಾಲೆಯಲ್ಲೆಲ್ಲ ತರಗತಿಯ ಲೀಡರ್ ಆಗಿ ಅನುಭವವಿದ್ದ ನಾನೂ ಅವರ ಜೊತೆ ಎದ್ದು ನಿಂತೆ.. ಹಾಸ್ಟೆಲ್ ಹುಡುಗರ ಬೆಂಬಲ ಬೇರೆ ಇತ್ತಲ..!
ಅಷ್ಟು ಜನ ಎದ್ದು ನಿಂತಿದ್ದನ್ನು ನೋಡಿ, ಪ್ರಾಧ್ಯಾಪಕರಿಗೆ ಅಚ್ಚರಿಯಾಗಿ ಚುನಾವಣೆ ಆಗಬೇಕೆಂದರು. ಅದಕ್ಕೂ ಮುನ್ನ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ತಮ್ಮ ಬಗ್ಗೆ ವಿವರಣೆ ನೀಡಬೇಕೆಂದು ಹೇಳಿದರು.. ಒಂಥರಾ ರಾಜಕಾರಣಿಗಳು ಕ್ಯಾಂಪೇನ್ ಮಾಡ್ತಾರಲ ಹಂಗೆ.. ನಾನೂ ಮಾತನಾಡಲು ವೇದಿಕೆಗೆ ಹೋಗಿ "ನನ್ನ ಆಯ್ಕೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳನ್ನೂ ನಾನು ಪರಿಹರಿಸುತ್ತೇನೆ. ಎಲ್ಲ ವಿಷಯಗಳಲ್ಲೂ ಬೆಂಬಲಿಸುತ್ತೇನೆ" ಎಂದೆಲ್ಲಾ, ಅಪಾರ ಭರವಸೆಗಳನ್ನು ಕೊಟ್ಟೆ.. ನನ್ನ ನಂತರ ಬಂದವರೂ ಅದೇ ಥರದ ಮಾತುಗಳನ್ನಾಡಿದರು..ನಂತರ ಚುನಾವಣಾ ನಡೆಯಿತು. ಎಲ್ಲ ಅಭ್ಯರ್ಥಿಗಳಿಗೂ ಒಂದು ಸಂಖ್ಯೆ ಕೊಟ್ಟು, ಆಯಾ ಸಂಖ್ಯೆ ಗೆ ಮತ ಹಾಕಲು ಹೇಳಲಾಯಿತು.. ನನ್ನ ಸಂಖ್ಯೆ ೨ ಆಗಿತ್ತು.. ವಿಪರ್ಯಾಸ ಅಂದ್ರೆ, ನಾನೇ ನನಗೆ ಮತ ಹಾಕಿಕೊಂಡಿರಲಿಲ್ಲ.!!! ಬೇರೆಯವನಿಗೆ ಮತ ಹಾಕಿದ್ದೆ.. ಅದಕ್ಕೆ ಕಾರಣವೂ ಇತ್ತು.. ಹಾಗೆ ತರಗತಿಯ ನಾಯಕನಾದವನು, ಅನೇಕ ಕೆಲಸಗಳಲ್ಲಿ,ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿದಾಗ, ದಿನವೂ ಬೇರೆ ಊರಿನಿಂದ ಪ್ರಯಾಣ ಮಾಡೋದ್ರಲ್ಲೇ ಸುಸ್ತಾಗಿರುತ್ತೆ, ಇನ್ನ ಬೇರೆ ಕೆಲಸ ಮಾಡಲು ಸಾಧ್ಯವೇ ಎಂಬ ದಿಗಿಲು ನನ್ನನ್ನು ಕಾಡಿತ್ತು..!!

ಅಂತು ಚುನಾವಣಾ ಮುಗಿದು, ಮತ ಎಣಿಕೆ ಶುರುವಾಯಿತು..ಮೊದ್ಲು ಮೊದ್ಲು ಬರೀ ಬೇರೆಯವರ ಹೆಸರೇ ಬರುತ್ತಿತ್ತು. ನನ್ನ ಹೆಸರು ಬರಲೇ ಇಲ್ಲ. ಅಲ್ಲಿಗೆ ಠೇವಣಿ ಕಳೆದುಕೊಂಡ ಪರಿಸ್ಥಿತಿಯಲ್ಲಿ ನಾನಿದ್ದೆ.. ಆದರೆ ಆಮೇಲೆ, ಧಿಡೀರನೆ ಒಂದಿಷ್ಟು ಮತಗಳು ನನ್ನ ಪರವಾಗಿ ಸತತವಾಗಿ ಬಂದು, ಮತ್ತೆ ನಿಂತಿತು. ಬೇಸಿಗೆಯ ಅಕಾಲಿಕ ಮಳೆಯ ಹಾಗೆ..!
ಕೊನೆಗೆ, "ಅನೂಪ್ ಶರ್ಮ' ಎಂಬ ಹುಡುಗ ನಾಯಕನಾಗಿ ಆಯ್ಕೆಯಾಗಿದ್ದ.. ಅವನಾದರೋ ಮೂಲತಃ ಅದೇ ಊರಿನವನು, ತರಗತಿಯಲ್ಲಿದ್ದ ಅರ್ಧದಷ್ಟು ಜನ ಅವನ ಸ್ನೇಹಿತರೇ..!!  ಅವನಿಗೆ ಬಂದಿದ್ದ ಮತಗಳು ೧೪.. ನನಗೆ ಬಂದಿದ್ದು ಅವನ ಅರ್ಧದಷ್ಟು, ಅಂದ್ರೆ ೭ ಮತಗಳು..ಎಲ್ಲ ಅಪರಿಚಿತರ ನಡುವೆಯೂ, ನನಗೂ ಬೆಂಬಲ ನೀಡುವ ೭-೮ ಜನರಾದರೂ ಇದ್ದಾರಲ್ಲ ಎಂಬ ಹೆಮ್ಮೆಯಂತೂ ನನಗಾಗಿತ್ತು..!!!

ದಿನಗಳುರುಳಿದವು.. ಮೊದಲನೇ ಸೆಮಿಸ್ಟರ್ ನ ಪರೀಕ್ಷೆಗಳು ಬಂದೆ ಬಿಟ್ಟವು.. ಪ್ರಾಯೋಗಿಕ ಪರೀಕ್ಷೆಗಳೆನೋ ಮುಗಿದವು.. ಬರವಣಿಗೆಯ ವಿಷಯಗಳದ್ದೇ ಒಂದು ಭಯ ಇದ್ದೆ ಇತ್ತು. ಮೊದಲನೇ ವಿಷಯ ಭೌತಶಾಸ್ತ್ರ.. ಎಷ್ಟು ಓದಿದರೂ ಮರೆತು ಹೋಗುವಂತೆ ಭಾಸವಾಗುತ್ತಿತ್ತು.. ಆದರೂ ಹೇಗೋ ಎಲ್ಲವೂ ನಿರಾತಂಕವಾಗಿ ಮುಗಿಯಿತು.. ತಿಂಗಳ ನಂತರ ಫಲಿತಾಂಶವೂ ಬಂದಿತು, ಆಗ ನನ್ನ ಬಳಿ ಲ್ಯಾಪ್-ಟಾಪ್ ಇರಲಿಲ್ಲ. ನನ್ನ ಗೆಳೆಯನೊಬ್ಬ ಫೋನ್ ಮಾಡಿ ತಿಳಿಸಿದ.
ಅಚ್ಚರಿಯೆಂದರೆ, ನಾನೇ ತರಗತಿಯಲ್ಲಿ ಮೊದಲಿಗನಾಗಿ ಬಂದಿದ್ದೆ.. ಇಡೀ ಕಾಲೇಜಿಗೆ ಮೂರನೆಯನವನಾಗಿ..!! ಇದರ ನಂತರ, ಹೆಚ್ಚು ಅಂಕ ಪಡೆದ ಕಾರಣಕ್ಕೆ, ಒಂದಿಷ್ಟು ಜನಪ್ರಿಯತೆಯೂ ಹೆಚ್ಚಾಗಿತ್ತು..

ರಜೆ ಮುಗಿದು, ಎರಡನೇ ಸೆಮಿಸ್ಟರ್ ನ ತರಗತಿಗಳಿಗೆ ಹೊರಡಲು ಅಣಿಯಾದೆನು..!!




[ ಮುಂದುವರೆಯುವುದು.............]



4 comments:

  1. Awesome work Bhima . . All the very best. . Carry on the good work. . Mundina bhagakkagi yederu nodtedin . . .

    ReplyDelete
    Replies
    1. ನಿನ್ನ ಬರವಣಿಗೆಯ ಬಗ್ಗೆ ವಿಶೇಷವಾಗಿ ಏನೂ ಹೇಳುವುದಿಲ್ಲ. ಇದ್ದ ಉಪಮಾನ ಉಪಮೆಯಗಳನ್ನೆಲ್ಲ ಹೇಳಾಗಿದೆ.
      ೨ ಸಾಲು ಓದಿದ ಕೂಡಲೇ, ಇಂಪಾರ್ಟೆಂಟ್ ಮೀಟಿಂಗ್ ಇರೋದು ತಲೆಗೆ ಹೊಳಿಯದೆ, ಇಡೀ ಲೇಖನವನ್ನು ಓದಿದೆ.
      ಎಂದಿನಂತೆ ಅಧ್ಬುತವಾಗೇ ಬರೆದಿದ್ದೀಯ. ಒಂದು ಕ್ಷಣ ನಮ್ಮ ಸುಂದರ ದಿನಗಳ ವಿಹಂಗಮ ಚಿತ್ರಗಳು ಕಣ್ಣೆದುರು ಹಾದು ಹೋದವು.
      ಮುಂದಿನ ರಿಲೀಸ್ ಗೆ ಕಾಯ್ತಾ ಇದೀನಿ.

      Delete
    2. thanks a lot..:)
      i ll be writing separate part on our Davana..:)

      Delete
    3. Nice dude namma col dina galanna nenapu madkonda haage aytu........

      Delete