Sunday, February 12, 2012

                           ( "ಶಾರ್ದೂಲವಿಕ್ರೀಡಿತ" ವೃತ್ತದಲ್ಲಿ ವಿರಚಿತವಾದ..)

                                                    ಶಿವಸ್ತುತಿ


                      

                    ಶ್ರೀಹೈಮಾತ್ಮಜಳಾಮನಪ್ರಣಯಪುಷ್ಪಾಂತರ್ಯಮಾಧುರ್ಯತಾ 
                ಗ್ರಾಹಿಭ್ರಾಮರವೃತ್ತಿಮಾನಸವಿಭೋ ಕೈಲಾಸಲೋಕೇಶ್ವರ..|
                ಮೋಹಾಕಾರ ವಿಪಾಟನೋತ್ಕಟಪಟೋ ಭಸ್ಮಾತಿಲಿಪ್ತಾಂಗನೇ
                ಹಾಹಾಕಾರವಿರಾಜಭೂತಗಣದಾ ನೇತಾರನೇ ವಂದಿಪೆ.||೧||

                ರುಂಡಸ್ತೋಮವ ಪೋಣಿಸಿರ್ಪ ವಿಲಸನ್ಮಾಲಾದಿ ಸನ್ಮಂಡಿತಮ್
                ತುಂಡಶ್ರೀಜಿತಭಾಸ್ಕರಾಭ ಧರಿಪಂ ಗಂಗಾಜಲಂ ಮಂಡೆಯೋಳ್.|
                ಗಾಂಡೀವಾಶ್ರಯಗಸ್ತ್ರದಾಯಕ ಮಹತ್ ಗಂಡಾಂತರಾಖಂಡನಮ್
                ಚಂಡಾಗ್ನಿಸ್ಥಿತನೇತ್ರನಂ ಭಜಿಸುವೆ ತ್ರೈಶೂಲದಂಡಾಯುಧಂ..||೨||

                ನಾಕಾಧೀಶರು ದೈತ್ಯರೆಲ್ಲ ಭರದಿಂ ಕ್ಷೀರಾಂಬುಧಿಸ್ಥಾಮೃತಂ
                ಬೇಕೆಂದು ಶ್ರಮದಿಂದ ಪರ್ವತವರಂ ಸರ್ಪೇಶನಿಂ ಬಂಧಿಸಿ.|
                ನೂಕಾಡಲ್ ಹೊರಹೊಮ್ಮಿದಾ ಗರಳವಂ ಲೋಕಾವನಕ್ಕಾಗಿಯೇ 
                ಸ್ವೀಕಾರಂ ಕೃತನಂ ನಮಸ್ಕರಿಪೆ ನಾ ಶ್ರೀನೀಲಕಂಠೇಶ್ವರಂ..||೩||

                ಈಶಾನತ್ರಿಪುರಾರಿನಂದಿಚಲನೇ ಸೋಮಾಂಕಭೂಷಾಜಟಾ
                ಪ್ತಾಶಾಮಂಡಲನೇ ಕಪಾಲಧರನೇ ನಾಗೋತ್ತಮಾಲಂಕೃತ.|
                ಶ್ರೀಶೈಲಾದಿದಶಾಧಿಕದ್ವಿಪುರದಿ ಜ್ಯೋತಿರ್ಮಯೋತ್ತುಂಗನೇ
                ಕ್ಲೇಶಾಘಂ ಪರಿಹಾರಿಸೋ ವಿಜಯವಂ ತಂದೈದಿಸೋ ಶೀಘ್ರದಿ..||೪|| 

5 comments:

  1. "ಗಂಗಾಜಲಂ ಮಂಡೆಯೋಳ್." !!!!
    ಆ ಪದ್ಯವು ಕೆಲವು ವಾರಗಳ ಹಿಂದೆ ಪರಾಗಸ್ಪರ್ಶದಲ್ಲಿ ನಾನು ಬರೆದಿದ್ದ "ಬಿಂದುಪೂರ್ವಕ ಡಕಾರ"ಕ್ಕೆ ಅದ್ಭುತ ಉದಾಹರಣೆಯಾಗುತ್ತದೆ! ಬಹಳ ಚೆನ್ನಾಗಿದೆ.ಉಳಿದ ಮೂರು ಚರಣಗಳೂ ತುಂಬಾ ಉತ್ಕೃಷ್ಟಮಟ್ಟದಲ್ಲಿವೆ. "ಪರಿಹಾರಿಸೋ..." ಪ್ರಯೋಗ ಸರಿಯಾಗಿ ಅರ್ಥವಾಗಲಿಲ್ಲ.

    ReplyDelete
    Replies
    1. 'ಪರಿಹಾರ' ಪದಕ್ಕೆ 'ಇಸು' ಪ್ರತ್ಯಯವನ್ನು ಸೇರಿಸಬಹುದೆಂದು ತಿಳಿದು 'ಪರಿಹಾರ ಮಾಡು' ಎಂಬರ್ಥದಲ್ಲಿ 'ಪರಿಹಾರಿಸು' ಅಂತ ಲೇಖಿಸಿದೆ.. ತಪ್ಪಿದ್ದಲ್ಲಿ ಸರಿಪಡಿಸುವೆ..!!

      Delete
  2. ಕೊನೆಸಾಲು "....ಪರಿಹಾರ ಮಾಡಿ ಜಯವಂ...." ಎಂದು ಮಾಡಿಬಿಟ್ಟರೆ ಬಗೆಹರಿಯುತ್ತದೆಯಲ್ಲ!!

    ReplyDelete
    Replies
    1. ಅದೂ ಸರಿಯೇ.. ಆದರೆ, ಈ ಪ್ರಯೋಗ ತಪ್ಪಿಲ್ಲ ಅನ್ನೋದು ನನ್ನ ಅನಿಸಿಕೆ..
      ವ್ಯಾಕರಣರೀತ್ಯಾ ತಪ್ಪಿದ್ದರೆ, ನೀ ಹೇಳಿದಂತೆಯೇ ಸರಿಪಡಿಸುವೆ..

      Delete
  3. "ಪರಿಹರಿಸು" ಹಾಗೂ "ಪರಿಹಾರ ಮಾಡು" ಇವೆರಡು ರೂಪಗಳಲ್ಲಿ ಬಳಸುತ್ತಾರೆ. 'ಇಸು' ಪ್ರತ್ಯಯ ಸೇರಿಸುವಾಗ ಧಾತು ಮೂಲರೂಪದಲ್ಲೇ ಇರಬೇಕು ಎಂದು ನನ್ನ ಅನಿಸಿಕೆ. ಯಾಕೆಂದರೆ 'ಕಾಣು+ಇಸು=ಕಾಣಿಸು, ಮಾಡು+ಇಸು=ಮಾಡಿಸು, ದರ್ಶ+ಇಸು=ದರ್ಶಿಸು, ಕಳುಹು+ಇಸು=ಕಳುಹಿಸು' ಇತ್ಯಾದಿಗಳಲ್ಲೆಲ್ಲ ಹಾಗೇ ಬಳಸುತ್ತಿದ್ದೇವೆ. ಪರಿಹಾರ ಇದು ಧಾತುವಿನಿಂದ ಸಾಧಿತಪದ. ಸಂಸ್ಕೃತದಲ್ಲಿ 'ಪರಿಹರ' ಎಂಬುದು 'ಪರಿ' ಉಪಸರ್ಗ ಪೂರ್ವಕ 'ಹರ-ಹರತಿ' ಧಾತು. ಹಾಗಾಗಿ ಸವರಣೆ ಅವಶ್ಯಕವೆಂದು ನನ್ನ ಭಾವನೆ. ಯಾವುದಕ್ಕೂ ಬಲ್ಲವರಿಂದೊಮ್ಮೆ ಕೇಳಿದರೆ ಒಳ್ಳಿತು:-)

    ಶಿವನಾ ಸ್ತೋತ್ರದೆ ವಾಣಿಗೇಕೆ ನತಿಯುಂ(!) ಪದ್ಯಂಗಳಲ್ಲೆಂದು ನಾಂ
    ಕವಿಯಾಗಿಂ ಲಘುದೋಷದಿಂದೆ ಬರೆಯಲ್ ಲೋಕಂಗಡೊಪ್ಪಿರ್ಕೆ ದಲ್!
    ಸವಿಯಂ ನೋಡದೆ ವಾಕ್ಯದೋಷಗಳ ತಾ ಸಾರುತ್ತಹೀಯಾಳಿಸಲ್
    ಭುವಿಯೊಳ್ಗಪ್ಪುದಲಾವಮಾನಮಿದರಿಂ ಲೇಸೆಂಬೆನಾನೋದನಂ!!

    ReplyDelete